ಸುಳ್ಯ; ಸ್ಕೂಟಿ ಕದ್ದು ಎಸ್ಕೇಪ್ ಆಗುತ್ತಿದ್ದ ಕಳ್ಳನೊಬ್ಬ ಮಾರ್ಗ ಮಧ್ಯೆ ಹೋಟೆಲ್ ಒಂದಕ್ಕೆ ಹೋಗಿ ಅಲ್ಲಿನ ಶೌಚಾಲಯದಲ್ಲಿ ಗಡದ್ ನಿದ್ದೆಗೆ ಜಾರಿ ಪೊಲೀಸರ ಅತಿಥಿಯಾಗಿರುವ ಘಟನೆ ಗೂನಡ್ಕದ ದೊಡ್ಡಡ್ಕ ಎಂಬಲ್ಲಿ ನಡೆದಿದೆ.
ಅಷ್ಟಕ್ಕೂ ಆಗಿದ್ದೇನು ಗೊತ್ತಾ?
ಉಡುಪಿ ಜಿಲ್ಲೆಯ ಕಾಪು ಎಂಬಲ್ಲಿಂದ ಸ್ಕೂಟಿಯೊಂದು ಕಳ್ಳತನವಾಗಿತ್ತು. ಆ ಸ್ಕೂಟಿ ಕದ್ದ ಕಳ್ಳ ಮಡಿಕೇರಿ ಕಡೆ ಬರುತ್ತಿದ್ದಾಗ ಆತನಿಗೆ ಹಸಿವಾಗಿದೆ. ಹಾಗಾಗಿ ಗೂನಡ್ಕದ ದೊಡ್ಡಡ್ಕದಲ್ಲಿನ ಹೋಟೆಲ್ಗೆ ಹೋಗಿದ್ದಾನೆ. ಈ ವೇಳೆ ಅಲ್ಲೇ ಇದ್ದ ಶೌಚಾಲಯಕ್ಕೆ ಹೋದ ಕಳ್ಳ ಇದು ಟಾಯ್ಲೆಟ್ ಅನ್ನೋದನ್ನೇ ಮರೆತು ಗಡದ್ ನಿದ್ದೆಗೆ ಜಾರಿದ್ದಾನೆ. ಒಳಗೆ ಹೋದ ಪುಣ್ಯಾತ್ಮ ಅರ್ಧ ಗಂಟೆಯಾದರೂ ಹೊರಗೆ ಏಕೆ ಬಂದಿಲ್ಲ? ಎಂದು ಅನುಮಾನಗೊಂಡು ಹೋಟೆಲ್ ಸಿಬ್ಬಂದಿ ಹೋಗಿ ನೋಡಿದಾಗ ಕಳ್ಳ ಗೊರೆಕೆ ಹೊಡೆಯುತ್ತಿರೋದು ಗೊತ್ತಾಗಿದೆ. ಇದರಿಂದ ಆತನ ಮೇಲೆ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ಈತ ಮತ್ತೆ ಸ್ಕೂಟಿ ಏರಿ ಮಡಿಕೇರಿ ಕಡೆಗೆ ಹೊರಟಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ಕಲ್ಲುಗುಂಡಿಯಲ್ಲಿ ಆತನನ್ನು ತಡೆದು ವಿಚಾರಣೆ ನಡೆಸಿದಾಗ ಆತನ ಅಮೋಘ ಸಾಧನೆ ಬಯಲಾಗಿದೆ. ತಕ್ಷಣ ಕಾಪು ಪೊಲೀಸರಿಗೆ ಮಾಹಿತಿನೀಡಿದ್ದಾರೆ. ಬಳಿಕ ಕಾಪು ಪೊಲೀಸರು ಬಂದು ಸ್ಕೂಟಿ ಹಾಗೂ ಕಳ್ಳನನ್ನು ಬಂಧಿಸಿ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.