ಬೆಂಗಳೂರು: ರಾಜ್ಯದಲ್ಲಿ ಗಲಭೆ ಸೃಷ್ಟಿಸಲು ಸಂಚು ರೂಪಿಸುತ್ತಿದ್ದ ಆರೋಪದ ಮೇಲೆ ಬಂಧನವಾಗಿರುವ ಪಿಎಫ್ಐ ಸಂಘಟನೆಯ ಪ್ರಮುಖರ ಮನೆಯಲ್ಲಿ ಸಾವರ್ಕರ್ ಪುಸ್ತಕ ಸಿಕ್ಕಿದೆ. ಸಾವರ್ಕರ್ ಸತ್ಯ ಎಷ್ಟು ಮಿಥ್ಯ ಪುಸ್ತಕಗಳು ಸೇರಿದಂತೆ ಹಿಂದೂ ಸಂಘಟನೆಗಳ ಹಲವು ಪ್ರಮುಖರ ಪುಸ್ತಕ ದೊರೆತಿದ್ದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸಾವರ್ಕರ್ ಪುಸ್ತಕದ ಜೊತೆಗೆ ಹಿಂದೂ ಟೆರರಿಸಂ ಆನ್ ಮೈನಾರಿಟಿ, ಕೋಮುವಾದ ಮತ್ತು ಭಯೋತ್ಫಾದನೆ, ಹೌ ಅಮೆರಿಕ ಗಾಟ್ ಡಿಫಿಟೆಡ್ ಇನ್ ವಾರ್ ಆನ್ ಟೆರರ್ ಪುಸ್ತಕಗಳು ಸಹ ದೊರೆತಿವೆ. ಈ ಪುಸ್ತಕಗಳ ಮೂಲಕ ಅನೇಕರಿಗೆ ಒಂದು ಕೋಮಿನ ಬಗ್ಗೆ ದ್ವೇಷ ಹುಟ್ಟಿಸಿ ಗಲಭೆ ಸೃಷ್ಟಿಸುವ ಹುನ್ನಾರ ನಡೆಸುತ್ತಿದ್ದರು ಎಂಬ ಅನುಮಾನ ಎನ್ಐಎ ತಂಡ ಹಾಗೂ ಪೊಲೀಸರಿಗೆ ಶುರುವಾಗಿದೆ. ಬಂಧನಕ್ಕೊಳಗಾಗಿರುವ ವ್ಯಕ್ತಿಗಳ ಮನೆಯಲ್ಲಿ ಸುಮಾರು 40 ಲಕ್ಷ ರೂಪಾಯಿಗಳು ಲಭಿಸಿದ್ದು, ಈ ಹಣ ಎಲ್ಲಿಂದ ಬಂತು?. ಹೇಗೆ ಬಂತು ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಆರೋಪಿತರ ಬ್ಯಾಂಕ್ ಖಾತೆಯ ವಿವರಗಳನ್ನ ಕೂಡ ಕಲೆ ಹಾಕುತ್ತಿದ್ದಾರೆ.