ಉಡುಪಿ: ಕರಾವಳಿಯಲ್ಲಿ ಒಂದು ಕಡೆ ಸಮುದ್ರಪಾಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಪ್ರವಾಸಿಗರು ನೀರಿಗೆ ಇಳಿಯದಂತೆ ತಡೆ ಯಲು ಮಲ್ಪೆ ಬೀಚ್ನಲ್ಲಿ ಸುರಕ್ಷತಾ ಕ್ರಮವಾಗಿ ತಡೆಬೇಲಿಗಳನ್ನು ನಿರ್ಮಿಸಲಾಗಿದೆ.
ಎರಡು ದಿನಗಳ ಹಿಂದೆ ಮಲ್ಪೆ ಬೀಚಿನ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಉತ್ತರ ಕರ್ನಾಟಕದ ಆರು ಮಂದಿ ಪ್ರವಾಸಿಗರನ್ನು ಜೀವರಕ್ಷಕ ದಳದವರು ರಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ಮಲ್ಪೆ ಅಭಿವೃದ್ಧಿ ಸಮಿತಿಯು ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ತಡೆಯಲು ಈ ಸುರಕ್ಷತಾ ಕ್ರಮಗಳನ್ನು ಕೈಗೆತ್ತಿಕೊಂಡಿದೆ.
ಬೀಚ್ನಲ್ಲಿ ಸುರಕ್ಷತಾ ಬೇಲಿಯಾಗಿ ಬಲೆಗಳನ್ನು ಆಳವಡಿಸಲಾಗಿದ್ದು, ಅಪಾಯ ಸೂಚಿಸಲು ಕೆಂಪು ಧ್ವಜಗಳನ್ನು ಇರಿಸಲಾಗಿದೆ. ಬೀಚ್ನಲ್ಲಿ ಒಂದು ಕಿ.ಮೀ.ವರೆಗೂ ಸುಮಾರು 6 ಅಡಿ ಎತ್ತರದಲ್ಲಿ ಬಲೆಯನ್ನು ಹಾಕಲಾಗಿದೆ. ಅದೇ ರೀತಿ ಎಚ್ಚರಿಕೆಯ ಬ್ಯಾನರ್ಗಳೊಂದಿಗೆ ಕೆಂಪು ಧ್ವಜಗಳನ್ನು ಇರಿಸಲಾಗಿದೆ.
ಈ ಮೂಲಕ ಪ್ರವಾಸಿಗರು ಸಮುದ್ರಕ್ಕೆ ಪ್ರವೇಶಿಸುವುದು ಮತ್ತು ನೀರಿಗೆ ಇಳಿಯುವುದನ್ನು ನಿಷೇಧಿಸಲಾಗಿದೆ. ಪ್ರವಾಸಿಗರು ಈ ತಡೆ ಬೇಲಿಯನ್ನು ಮೀರಿ ಸಮುದ್ರಕ್ಕೆ ಇಳಿದರೆ 500 ರೂ. ದಂಡ ವಿಧಿಸಲಾಗುವುದು ಎಂದು ಬೀಚ್ ಉಸ್ತುವಾರಿ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.