ಚೆನ್ನೈ : ಆಗಸ್ಟ್ 5 ರಂದು ಕೊರೊನಾ ಹಿನ್ನೆಲೆಯಲ್ಲಿ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದ ಎಸ್ ಪಿ ಬಾಲಸುಬ್ರಮಣ್ಯಂ ವಿಧಿವಶರಾಗಿದ್ದಾರೆ. ಎಸ್ ಪಿ ಬಾಲಸುಬ್ರಮಣ್ಯಂ ಅವರು ಮೊದಲಿನಂತಾಗಲಿ ಅನ್ನೋ ಅವರ ಕೋಟ್ಯಂತರ ಅಭಿಮಾನಿಗಳ ಹಾರೈಕೆ ಕೊನೆಗೂ ಕೈಗೂಡಲಿಲ್ಲ. ಇನ್ನು ತಂದೆಯ ನಿಧನದ ಬಗ್ಗೆ ಅವರ ಪುತ್ರ ಎಸ್ ಪಿ ಚರಣ್ ಅವರು ಮಾಹಿತಿ ನೀಡಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆ 4 ನಿಮಿಷಕ್ಕೆ ತಮ್ಮ ತಂದೆ ನಿಧನರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಗುರುವಾರ ಎಂಜಿಎಂ ಆಸ್ಪತ್ರೆ ಹೆಲ್ತ್ ಬುಲೆಟಿನ್ ಒಂದನ್ನು ಬಿಡುಗಡೆ ಮಾಡಿತ್ತು.ಅದರಲ್ಲಿ ಎಸ್ ಪಿ ಬಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಮಾಹಿತಿ ನೀಡಿತ್ತು. ಇದೀಗ ಅವರು ನಿಧನರಾಗಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಕೊರೊನಾದಿಂದ ಗುಣಮುಖರಾಗಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಬಗ್ಗೆ ಅವರ ಪುತ್ರ ಎಸ್ ಪಿ ಚರಣ್ ಮಾಹಿತಿ ನೀಡಿದ್ದರು. ಹಾಗಾಗಿ ಅವರ ಅಭಿಮಾನಿಗಳು ಖುಶಿಯಾಗಿದ್ದರು. ಮತ್ತೆ ಅವರ ಹಾಡುಗಳನ್ನು ಕೇಳ್ಬೋದು ಅನ್ನೋ ಖುಷಿಯಲ್ಲಿದ್ದರು ಆದ್ರೆ ಅದು ಬರೀ ಕನಸಾಗಿಯೇ ಉಳಿದಿದೆ.
ದಕ್ಷಿಣ ಭಾರತ ಮಾತ್ರವಲ್ಲದೇ ಬಾಲಿವುಡ್ ಸೇರಿದಂತೆ ದೇಶದ ವಿವಿಧ ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ ಗಾನಗಂಧರ್ವ. ಸಂಗೀತ ಲೋಕಕ್ಕೆ ಎಸ್ ಪಿ ಬಾಲಸುಬ್ರಮಣ್ಯಂ ಅವರ ಅಗಲಿಕೆ ತುಂಬಲಾರದ ಬಹುದೊಡ್ಡ ನಷ್ಟ.