ಉಡುಪಿ : ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ ಹಾಗೂ ಉಡುಪಿಯಲ್ಲಿ ಕಳೆದ ಒಂದೆರಡು ತಿಂಗಳುಗಳಿಂದ ರೌಡಿ ಆರ್ಭಟ ಜೋರಾಗ್ತಿದೆ. ಕಳೆದೆರಡು ತಿಂಗಳಲ್ಲಿ ಮೂರು ನಾಲ್ಕು ರೌಡಿಗಳ ಹತ್ಯೆಯಾಗಿದೆ. ಹೀಗಿರುವಾಗಲೇ ಉಡುಪಿಯಲ್ಲಿ ಮತ್ತೆ ರೌಡಿ ಶೀಟರ್ ಸೈಫ್ ಮೇಲೆ ದಾಳಿಗೆ ಯತ್ನಿಸಲಾಗಿದೆ.
ರೌಡಿಶೀಟರ್ ಸೈಫುದ್ದೀನ್ ಮೇಲೆ ದುಷ್ಕರ್ಮಿಗಳು ಕೊಲೆ ಯತ್ನಕ್ಕೆ ಮುಂದಾಗಿದ್ದಾರೆ. ಡಸ್ಟರ್ ಕಾರ್ ನಿಂದ ಇಳಿದು ತಲವಾರು ತೋರಿಸಿದ ದುಷ್ಕರ್ಮಿಗಳು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ನಡೆದಿರುವ ಅನೇಕ ಅಪರಾಧ ಚಟುವಟಿಕೆಗಳಲ್ಲಿ ಸೈಫ್ ಭಾಗಿಯಾಗಿದ್ದ. ಇದೀಗ ಈತನ ಕೊಲೆಗೆ ದುಷ್ಕರ್ಮಿಗಳು ಮುಂದಾಗಿದ್ದರು. ಆದರೆ ಕಚೇರಿಯಲ್ಲಿ ಸೈಫ್ನ ಸಹವರ್ತಿಗಳು ಇದ್ದ ಕಾರಣ, ಕೊಲೆಯ ಯತ್ನ ವಿಫಲವಾಗಿದೆ.
ಕಂದು ಬಣ್ಣದ ಡಸ್ಟರ್ ಕಾರಿನಲ್ಲಿ ನಾಲ್ಕೈದು ಮಂದಿ ದುಷ್ಕರ್ಮಿಗಳು ತಲವಾರಿನೊಂದಿಗೆ ಬಂದಿದ್ದರು. ಸೈಫುದ್ದೀನ್ ಕರಾವಳಿ ಭಾಗದಲ್ಲಿ ಎಕೆಎಂಎಸ್ ಹೆಸರಿನ ಖಾಸಗಿ ಬಸ್ ಕಂಪೆನಿ ನಡೆಸಿಕೊಂಡಿದ್ದಾನೆ. ಸೈಫುದ್ದೀನ್ ಕಳೆದ ಫೆಬ್ರವರಿ ತಿಂಗಳಲ್ಲಿ ಮುಂಬೈನ ಬಾರ್ ಮಾಲೀಕ ವಶಿಷ್ಟ ಯಾದವ್ ಎಂಬಾತನನ್ನ ಉಡುಪಿಗೆ ಕರೆಸಿ ಕೊಲೆ ಮಾಡಿಸಿದ್ದ. ಈ ಕೇಸಲ್ಲಿ ಜೈಲು ಸೇರಿದವ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ.
