ಚಿಕ್ಕಮಗಳೂರು: ರಾತ್ರಿ ವೇಳೆ ಸಂಚರಿಸುವ ವಾಹನಗಳನ್ನು ನಿರ್ಜನ ಪ್ರದೇಶದಲ್ಲಿ ಅಡ್ಡಗಟ್ಟಿ, ವಾಹನ ಸವಾರರಲ್ಲಿದ್ದ ಹಣ ಅಮೂಲ್ಯ ವಸ್ತುಗಳನ್ನು ದರೋಡೆ ಮಾಡುತ್ತಿದ್ದ ತಂಡವನ್ನು ಮೂಡಿಗೆರೆಯ ಪೊಲೀಸ್ ತಂಡ ಯಶಸ್ವಿಯಾಗಿ ಬಂಧಿಸಿದೆ.

ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಜನರನ್ನು ಬೆದರಿಸುವ ಈ ಸುಲಿಗೆಕೋರರ ತಂಡ, ಕಣ್ಣಿಗೆ ಖಾರದ ಪುಡಿಯನ್ನು ಎರಚಿ, ಪಿಸ್ತೂಲಿನಿಂದ ಬೆದರಿಸಿ ಬೇರೆಯವರ ಹಣವನ್ನು ದೋಚುತ್ತಿದ್ದ ಘಟನೆಗಳು ಬೆಳಕಿಗೆ ಬಂದಿದೆ. ದರೋಡೆಕೋರರ ತಂಡದಲ್ಲಿದ್ದ ಮೂಡಿಗೆರೆ ಆಜಾದ್ ನಗರದ ನಿವಾಸಿ ಶಿವಕುಮಾರ್, ಮಂಡ್ಯ ಜಿಲ್ಲೆ ಹೊಸೂರಿನ ಶಿವಕುಮಾರ, ಬೆಂಗಳೂರಿನ ಮರ್ಲೇ ಅಜಯ್ ಕುಮಾರ್ ಸಿಂಗ್, ಹೊಳೆನರಸೀಪುರದ ಕುಮಾರಸ್ವಾಮಿ ಎಂಬವರನ್ನು ಬಂಧಿಸಿದ್ದಾರೆ.

ಪೊಲೀಸರು ಎಂದಿನಂತೆ ಶನಿವಾರ ಗಸ್ತು ತಿರುಗುವಾಗ, ಬೇರೆ ವಾಹನ ಸವಾರರಿಂದ ಬಂದ ಮಾಹಿತಿಯನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಸುಲಿಗೆಕೋರರ ಬಳಿಇದ್ದ ಟಾರ್ಚ್, ಕಾರದಪುಡಿ, ಡ್ರಾಗರ್,2 ಪಿಸ್ತೂಲ್ ಹಾಗೂ ಬಲವಾದ ಕಬ್ಬಿಣದ ರಾಡುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖೆಯೂ ಆರಂಭವಾಗಿದ್ದು ಕೆಲವೇ ದಿನಗಳಲ್ಲಿ ಈ ಕುರಿತು ಮಾಹಿತಿ ಹೊರ ಬೀಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.