ಬ್ರಹ್ಮಾವರ: ಕನ್ನಡ ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಇಂದು ಸಾಂಪ್ರದಾಯಿಕ ಉಡುಗೆಯಲ್ಲಿ ಬಂದು ಭತ್ತ ನಾಟಿ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಉಡುಪಿಯ ಕೇದಾರೋತ್ಥಾನ ಪ್ರತಿಷ್ಠಾನ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 2000 ಎಕರೆ ಹಡಿಲು ಗದ್ದೆಯಲ್ಲಿ ಬೇಸಾಯ ಮಾಡುತ್ತಿದೆ. ಇದರ ಅಂಗವಾಗಿ ಬ್ರಹ್ಮಾವರ ತಾಲೂಕಿನ ವಾರಂಬಳ್ಳಿಯಲ್ಲಿ ಇಂದು ನೂರಾರು ಎಕರೆ ಜಮೀನಿನಲ್ಲಿ ನಾಟಿ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಈ ಭತ್ತ ನಾಟಿ ಕಾರ್ಯಕ್ಕೆ ಪಂಚೆ ಹಾಗೂ ಟೋಪಿ ಧರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿಯೇ ಬಂದ ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಚಾಲನೆ ನೀಡಿದರು. ಬಳಿಕ ಕೆಸರುಗದ್ದೆಗಿಳಿದು ರಕ್ಷಿತ್ ಶೆಟ್ಟಿ ಭೂಮಿ ತಾಯಿಗೆ ಪೂಜೆಯನ್ನು ಸಲ್ಲಿಸಿ ನಾಟಿ ಯಂತ್ರಕ್ಕೆ ಪೈರುಗಳನ್ನು ಕೂಡ ನೀಡಿದರು.
ಕೆಸರುಗದ್ದೆಯಲ್ಲಿ ಕೈ ನಾಟಿ ಮಾಡುವ ಮೂಲಕ ಕೃಷಿ ಚಟುವಟಿಕೆಯಲ್ಲಿ ಭಾಗಿಯಾದರು. ಈ ವೇಳೆ ರಕ್ಷಿತ್ ಶೆಟ್ಟಿ ಜೊತೆ ನೂರಾರು ಸ್ಥಳೀಯರು ಬೇಸಾಯ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ರಕ್ಷಿತ್ ಶೆಟ್ಟಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜೊತೆ ಸೆಲ್ಫಿ ತೆಗೆಯಲು ಮುಗಿಬಿದ್ದರು.