ಮಂಗಳೂರು: ಮಂಗಳೂರು: ಕಾರು ಅಡ್ಡಗಟ್ಟಿ ಚಾಕು ತೋರಿಸಿ ಮಂಗಳಮುಖಿಯರು ಹಣ ಸುಲಿಗೆ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.
ವ್ಯಕ್ತಿಯೋರ್ವರು ಜು. 9ರಂದು ಕಾರಿನಲ್ಲಿ ಹೋಗುತ್ತಿದ್ದಾಗ ರಾತ್ರಿ 11.30ರ ವೇಳೆಗೆ ನಗರದ ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಜಂಕ್ಷನ್ನಿಂದ ಸ್ವಲ್ಪ ಮುಂದೆ ಮಂಗಳಮುಖಿ ಕಾರನ್ನು ನಿಲ್ಲಿಸುವಂತೆ ಹೇಳಿದ್ದಾಳೆ. ಅದರಂತೆ ವ್ಯಕ್ತಿ ಕಾರನ್ನು ನಿಲ್ಲಿಸಿ ಮಂಗಳಮುಖಿಯ ಬಳಿ ಹೋದಾಗ ಪೊದೆಯಲ್ಲಿ ಅವಿತು ಕುಳಿತಿದ್ದ ಇತರ ಮೂವರು ಮಂಗಳಮುಖಿಯರು ಚಾಕು ತೋರಿಸಿ ಬೆದರಿಸಿ ಕಿಸೆಯಲ್ಲಿದ್ದ ಸುಮಾರು 4,500 ರೂ.ನಗದು ಹಾಗೂ ಕಾರಿನ ಡ್ಯಾಶ್ಬೋರ್ಡ್ನಲ್ಲಿದ್ದ ವ್ಯವಹಾರದ ಸುಮಾರು 1.75 ಲಕ್ಷ ರೂ. ನಗದನ್ನು ಸುಲಿಗೆ ಮಾಡಿದ್ದಾರೆ ಎಂದು ದೂರಲಾಗಿದೆ.
ಇನ್ನು ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಮಾನಹಾನಿ ಮಾಡುವುದಾಗಿ ಬೆದರಿಸಿ ಸಮೀಪದಲ್ಲಿ ನಿಲ್ಲಿಸಿದ ಬಿಳಿ ಬಣ್ಣದ ಕಾರಿನಲ್ಲಿ ಕೊಟ್ಟಾರ ಕಡೆಗೆ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.