ಉಡುಪಿ: ಹಾವೇರಿಯ ಹಾನಗಲ್ ರಾಜ್ಯ ಹೆದ್ದಾರಿಯಲ್ಲಿ ಬೈಕುಗಳೆರಡು ಡಿಕ್ಕಿ ಹೊಡೆದ ಪರಿಣಾಮ ಕುಂದಾಪುರ ಮೂಲದ ಸಚಿನ್ ಶೆಟ್ಟಿ(28) ಯುವ ಉದ್ಯಮಿ ಸಾವನ್ನಪಿರುವ ದುರ್ಘಟನೆ ನಡೆದಿದೆ.
ಮೂಲತ: ಕುಂದಾಪುರ ಸಮೀಪದ ವಡ್ಡರ್ಸೆಯವರಾದ ಸಚಿನ್ ಶೆಟ್ಟಿ ಕಳೆದ ಕೆಲವು ವರ್ಷಗಳಿಂದ ಹಾನಗಲ್ ರಸ್ತೆಯಲ್ಲಿ ‘ನಿಸರ್ಗ ‘ ಎಂಬ ಹೆಸರಿನ ಹೋಟೆಲೊಂದನ್ನು ನಡೆಸುತ್ತಿದ್ದರು.
ಎಂದಿನಂತೆ ಹೋಟೆಲ್ ಗೆ ಬರಲು ಹತ್ತಿರವಾಗುತ್ತಿದ್ದ ರಸ್ತೆಯ ಡಿವೈಡರ್ ನಡುವಿನ ಮೂಲಕ ಬೈಕ್ ನಲ್ಲಿ ಹಾದು ಹೋಗಲು ಯತ್ನಿಸಿದಾಗ ಅತ್ತ ಕಡೆಯ ರಸ್ತೆಯ ಎಡಭಾಗದಲ್ಲಿ ವೇಗವಾಗಿ ಬರುತ್ತಿದ್ದ ಬೈಕ್ ಸಚಿನ್ ಚಲಾಯಿಸುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆದಿದೆ.
ಈ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಚಿನ್ ರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದ ಸಚಿನ್ ಸಾವಿಗೀಡಾವಿದ್ದಾರೆ.
ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸುವಲ್ಲಿ ಸ್ಥಳೀಯ ಪೊಲೀಸರು ವಿಳಂಬ ಮಾಡಿ ಬೇಜವಾಬ್ದಾರಿಯಿಂದ ವರ್ತಿಸಿದ್ದಾರಲ್ಲದೆ, ಇಲ್ಲಸಲ್ಲದ ಕಾನೂನು ಬಗ್ಗೆ ಪ್ರವಚನಗೈಯುತ್ತಾ ಗೋಳುಹೊಯ್ದು ಕೊಂಡಿದ್ದಾರೆಂದು ಮೃತನ ಕಡೆಯವರು ಆರೋಪಿಸಿದ್ದಾರೆ.