ಮಣಿಪಾಲ: ಹಳೆಯದಾದ ಕಬ್ಬಿಣದ ವಿದ್ಯುತ್ ಕಂಬವೊಂದು ತುಂಡಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನ ಮೇಲೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ಪರ್ಕಳ ಸಮೀಪದ ಕೆಳಪರ್ಕಳದ ಶ್ರೀಕೃಷ್ಣ ಕಲ್ಯಾಣ ಮಂಟಪದ ಎದುರು ರಾಷ್ಟ್ರೀಯ ಹೆದ್ದಾರಿ169ಎಯಲ್ಲಿ ನಡೆದಿದೆ.
ಗಾಯಗೊಂಡವರನ್ನು ಹಿರಿಯಡ್ಕ ಅಂಜಾರಿನ ಸದಾಶಿವ ಶೇರಿಗಾರ್(58) ಎಂದು ಗುರುತಿಸಲಾಗಿದೆ. ಇವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೈಕ್ ಸವಾರ ಹರೀಶ್ ಎಂಬವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯ ಕಂಪೌಂಡ್ ಒಳಗಿದ್ದ ತಂಗಿನ ಮರವೊಂದು ಗಾಳಿಯಿಂದಾಗಿ ವಿದ್ಯುತ್ ತಂತಿಯ ಮೇಲೆ ಬಿತ್ತೆನ್ನಲಾಗಿದೆ. ಇದರಿಂದಾಗಿ ಅದೇ ಕಂಪೌಂಡ್ ಒಳಗಿದ್ದ ವಿದ್ಯುತ್ ಕಂಬದ ಜೊತೆ ರಸ್ತೆ ಬದಿ ಇದ್ದ ಈ ವಿದ್ಯುತ್ ಕಂಬಗಳು ಕೂಡ ತಂತಿ ಸಮೇತವಾಗಿ ಬಿದ್ದವು. ಇದೇ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಮೇಲೆ ವಿದ್ಯುತ್ ಕಂಬ ಬಿದ್ದಿದೆ ಎಂದು ಮಣಿಪಾಲ ಪೊಲೀಸರು ತಿಳಿಸಿದ್ದಾರೆ.
ಪರ್ಕಳ ಮೆಸ್ಕಾಂ ಸಿಬ್ಬಂದಿಗಳು ರಸ್ತೆಗೆ ಅಡ್ಡವಾಗಿ ಬಿದ್ದ ಕಂಬವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ.