ನಟ, ನಿರ್ದೇಶಕ ರಿಷಬ್ ಶೆಟ್ಟಿ ಕಾಂತಾರ ಯಶಸ್ಸಿನ ಬೆನ್ನಲ್ಲೇ ಇದೀಗ ಕಾಂತಾರ ಪಾರ್ಟ್ 2 ಪ್ರಾರಂಭಿಸಲು ತಯಾರಿ ನಡೆಸಿದ್ದಾರೆ. ಚಿತ್ರೀಕರಣ ಶುರು ಮಾಡಲು ಮೊದಲು ರಿಷಬ್ ಮತ್ತು ತಂಡ ಪಂಜುರ್ಲಿ ದೈವದ ಅಪ್ಪಣೆ ಕೇಳಿದ್ದಾರೆ. ದೈವ ಹಲವು ಷರತ್ತುಗಳ ಮೂಲಕ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ.
ಮಂಗಳೂರು ನಗರ ಹೊರವಲಯದ ಬಂದಲೆಯ ಮನೆಯಲ್ಲಿ ನಡೆದ ಪಂಜುರ್ಲಿ ಕೋಲಾದಲ್ಲಿ ಕಾಂತಾರ ಸಿನಿಮಾ ತಂಡ ಅಣ್ಣಪ್ಪ ಪಂಜುರ್ಲಿ ದೈವದ ಬಳಿ ಕಾಂತಾರ 2 ಸಿನಿಮಾ ಮಾಡುವ ಕುರಿತು ರಿಷಬ್ ಒಪ್ಪಿಗೆ ಕೇಳಿದ್ದರು ಎನ್ನಲಾಗಿದೆ. ‘ಕಾಂತಾರ’ ಭಾಗ 2 ಸಿನಿಮಾ ಮಾಡಲು ದೈವ ಅನುಮತಿಯನ್ನು ನೀಡಿದೆ. ಆದರೆ ಕೆಲವು ಷರತ್ತುಗಳನ್ನು, ಎಚ್ಚರಿಕೆಯನ್ನು ದೈವ ನೀಡಿದೆ ಎನ್ನಲಾಗಿದೆ. ‘ಕಾಂತಾರ’ ಚಿತ್ರತಂಡಕ್ಕೆ ಅಭಯ ನೀಡಿರುವ ಅಣ್ಣಪ್ಪ ಪಂಜುರ್ಲಿ ‘ಮೊದಲು ಚಿತ್ರ ಮಾಡೋವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ, ಈ ಬಾರಿ ಮಾತ್ರ ನೂರು ಬಾರಿ ಯೋಚನೆ ಮಾಡಿ. ಮಾಡಿದ ಪ್ರಯತ್ನಕ್ಕೆ ಯಾವತ್ತೂ ಜಯ ಸಿಗುವ ರೀತಿ ಮಾಡುತ್ತೇನೆ. ಈ ಹಿಂದೆ ಇದ್ದ ತಂಡದ ಜೊತೆಗೆ, ಅಷ್ಟೇ ಶುದ್ಧಾಚಾರದಲ್ಲಿ ಮುಂದುವರಿಯಿರಿ’ ಎಂದು ದೈವ ಅಣ್ಣಪ್ಪ ಪಂಜುರ್ಲಿ ಕಾಂತಾರ ಚಿತ್ರತಂಡಕ್ಕೆ ಅಭಯ ನೀಡಿದೆ ಎನ್ನಲಾಗಿದೆ.
ಈ ಕುರಿತು ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡದೇ ಇದ್ದರೂ, ಕೋಲಾದಲ್ಲಿ ಭಾಗವಹಿಸಿದ್ದ ಹಲವರು ಈ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.