Saturday, April 27, 2024
Homeತಾಜಾ ಸುದ್ದಿಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಳದಿಂದ 'ಅಂಗಳದಲ್ಲಿ ಅಕ್ಕಿ' ಯೋಜನೆ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಳದಿಂದ ‘ಅಂಗಳದಲ್ಲಿ ಅಕ್ಕಿ’ ಯೋಜನೆ

spot_img
- Advertisement -
- Advertisement -

ಪುತ್ತೂರು ಕಳೆದ ವರ್ಷ ತಾಲೂಕಿನ ನಾನಾ ದೇವಸ್ಥಾನಗಳನ್ನು ಸೇರಿಸಿಕೊಂಡು ಹಳ್ಳಿ ಹಳ್ಳಿಗಳಲ್ಲಿ ಹಡಿಲು ಗದ್ದೆ ಬೇಸಾಯ ಆಂದೋಲನವನ್ನು ‘ಗದ್ದೆಗಿಳಿಯೋಣ – ಭತ್ತ ಬೆಳೆಯೋಣ’ ಎಂಬ ಪರಿಕಲ್ಪನೆಯ ಅಡಿಯಲ್ಲಿ ನಡೆಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಈ ಬಾರಿ ಈ ನಿಟ್ಟಿನಲ್ಲಿ ಇನ್ನೊಂದು ವಿನೂತನ ಹೆಜ್ಜೆ ಇಟ್ಟಿದೆ.

ಅಂಗಳದಲ್ಲಿ ಅಕ್ಕಿ’ ಎಂಬ ವಿಶಿಷ್ಟ ಯೋಜನೆ ಜಾರಿಗೊಳಿಸಲಾಗಿದ್ದು, ದೇವಳದ ಎದುರಿನ ಬಾಕಿ ತಿಮಾರ್‌ನಲ್ಲಿ ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ನೇರ ಬಿತ್ತನೆ ಮೂಲಕ ಗದ್ದೆ ಮಾಡಲು ಮುಂದಡಿ ಇಡಲಾಗಿದೆ.

ದೇವಸ್ಥಾನದ ಎದುರಿನ ಪಂಚಾಕ್ಷರಿ ಮಂಟಪದಿಂದ ಕಂಬಳ ಗದ್ದೆಯವರೆಗಿನ ಪ್ರದೇಶದಲ್ಲಿ ಗದ್ದೆ ಮಾಡಲು ಕಾಮಗಾರಿ ಆರಂಭಿಸಲಾಗಿದೆ. ಗದ್ದೆ ಹುಣಿ ನಿರ್ಮಿಸಿ, ಉಳುಮೆ ಮಾಡಿ ನೀರು ನಿಲ್ಲಿಸಿ ನೇಜಿ ನಾಟಿ ಮಾಡುವ ವಿಧಾನ ಇಲ್ಲಿ ಸ್ವಲ್ಪ ಕಷ್ಟಕರ ಎಂಬ ಹಿನ್ನೆಲೆಯಲ್ಲಿ ನೇರ ಬಿತ್ತನೆ ಮೂಲಕ ಬಾನೊಟ್ಟು (ಮಳೆ ನೀರಿನಾಸರೆ) ಮಾದರಿಯಲ್ಲಿ ಬೇಸಾಯ ಮಾಡಲು ನಿರ್ಧರಿಸಲಾಗಿದೆ.

ಈಗಾಗಲೇ ಯಾಂತ್ರಿಕ ವಿಧಾನದಿಂದ ಗದ್ದೆ ಅಗೆತ ಮಾಡಿ ಮಣ್ಣು ಹದ ಮಾಡಲಾಗಿದೆ. ಇದರ ಮೇಲೆ ಅಡಕೆ ಸಿಪ್ಪೆಯನ್ನು ಒಂದು ಪದರದಷ್ಟು ಹರಡಲಾಗುತ್ತದೆ. ಬಳಿಕ ಮಣ್ಣು – ಸಿಪ್ಪೆ ಮಿಶ್ರಣ ಮಾಡಿ ಅದರ ಮೇಲೆ ಸೆಗಣಿ ಸ್ಲರಿಯನ್ನು ಸಿಂಪಡಣೆ ಮಾಡಿ ಬೀಜ ಬಿತ್ತನೆ ಮಾಡಲಾಗುತ್ತದೆ. ನೇಜಿ ಬೆಳೆಯುತ್ತಿದ್ದಂತೆ ಸಾವಯವ ಮಾದರಿಯ ಗೊಬ್ಬರ ನೀಡಿ, ಮಳೆ ನೀರಿನ ಆಸರೆ ಬಳಸಿಕೊಳ್ಳಲಾಗುತ್ತದೆ. ಅಗತ್ಯ ಬಿದ್ದಲ್ಲಿ ನೀರನ್ನು ಕೂಡ ಸಿಂಪಡಣೆ ಮಾಡಲು ನಿರ್ಧರಿಸಲಾಗಿದೆ.

ಕಳೆದ ವರ್ಷ ಕಂಬಳ ಗದ್ದೆಯ ಒಂದು ಪಾರ್ಶ್ವದಲ್ಲಿ ಅಲ್ಪ ಪ್ರಮಾಣದಲ್ಲಿ ನೇರ ಬಿತ್ತನೆ ಮೂಲಕ ಗದ್ದೆ ಮಾಡಲಾಗಿತ್ತು. ಅದನ್ನೇ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಮಾಡಲಾಗಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಿ. ಐತ್ತಪ್ಪ ನಾಯ್ಕ್ ತಿಳಿಸಿದ್ದಾರೆ. ಈ ಗದ್ದೆಯಲ್ಲಿ ಸಿಗುವ ಭತ್ತವನ್ನು ದೇವಸ್ಥಾನದ ನೈವೇದ್ಯಕ್ಕೆ ಬಳಸುವುದು ದೇವಸ್ಥಾನದ ಯೋಜನೆಯಾಗಿದೆ.

ಮಹಾಲಿಂಗೇಶ್ವರ ದೇವಸ್ಥಾನದ ಸುತ್ತಲೂ ಶತಮಾನಗಳಿಂದಲೂ ಗದ್ದೆ ಬೇಸಾಯ ಅವ್ಯಾಹತವಾಗಿ ನಡೆಯುತ್ತಿತ್ತು. ಸುತ್ತಲೂ ಗದ್ದೆ, ಅದರ ಒಂದು ಪಾರ್ಶ್ವದ ಎತ್ತರದ ದಿಣ್ಣೆಯಲ್ಲಿ ದೇವಸ್ಥಾನ – ಇದು ಪುತ್ತೂರು ದೇಗುಲದ ವಿಶಿಷ್ಟತೆ. ಇತ್ತೀಚಿನ ದಶಕಗಳವರೆಗೂ ಇಲ್ಲಿ ಬೇಸಾಯ ನಡೆಯುತ್ತಿತ್ತು ಎಂದು ಹಿರಿಯರು ಹೇಳುತ್ತಾರೆ.

ಕ್ರಮೇಣ ಗದ್ದೆ ಬೇಸಾಯ ಇಳಿಮುಖವಾಗಿದ್ದು, ನಿಧಾನವಾಗಿ ದೇವಳದ ಸುತ್ತಲಿನ ಜಾಗಕ್ಕೆ ಅತಿಕ್ರಮಣ ಭೀತಿ ವ್ಯಕ್ತವಾಗುತ್ತಿದ್ದಂತೆ, ಪುತ್ತೂರು ತಹಸೀಲ್ದಾರ್‌ ಆಗಿದ್ದ ಸಿ. ಎಚ್‌. ಕೋಚಣ್ಣ ರೈ ಅವರು ವಿಶೇಷ ಆಸಕ್ತಿ ವಹಿಸಿ, ಸುಮಾರು 14 ಎಕರೆ ಪ್ರದೇಶವನ್ನು ದೇವಳದ ಹೆಸರಿಗೆ ನೋಂದಾಯಿಸಿ ದೇವರ ಗದ್ದೆಯ ಮಹತ್ವ ಉಳಿಸಿ ಕೊಟ್ಟಿದ್ದರು. ಇವತ್ತಿಗೂ ಈ ಗದ್ದೆಯನ್ನು ದೇವಮಾರ್‌ (ದೇವರ ಗದ್ದೆ) ಎಂದೇ ಕರೆಯಲಾಗುತ್ತದೆ. ಪ್ರಸ್ತುತ ಈ ಪ್ರದೇಶದಲ್ಲಿ ಮತ್ತೆ ಗದ್ದೆ ಸಂಸ್ಕೃತಿ ಆರಂಭಿಸುವ ಮೂಲಕ ಪ್ರಾಚೀನ ಪರಂಪರೆ ಸಂರಕ್ಷಿಸಲಾಗಿದೆ. ಪ್ರಸ್ತುತ ದೇವಳದ ಸಂಪೂರ್ಣ ಜಮೀನಿಗೆ ಆವರಣ ಗೋಡೆ ನಿರ್ಮಿಸುವ ಕೆಲಸ ಪ್ರಗತಿಯಲ್ಲಿದೆ.

- Advertisement -
spot_img

Latest News

error: Content is protected !!