ಉಡುಪಿ: ಹಿಜಾಬ್ ವಿವಾದ ವಿಚಾರದಲ್ಲಿ ದೇಶ ಎತ್ತ ಸಾಗುತ್ತಿದೆ ಎಂದು ಉಡುಪಿಯ ಪಿಯುಸಿ ವಿದ್ಯಾರ್ಥಿನಿ ಆಲಿಯಾ ಅಸಾದಿ ಮಾಡಿದ್ದ ಟ್ವೀಟ್ ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.
ದೇಶ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ದೇಶದ ಆಶಯವನ್ನು ಅರ್ಥ ಮಾಡಿಕೊಂಡು ಕಾನೂನು ಗೌರವಿಸುವುದು ನಿಮ್ಮ ಜವಾಬ್ದಾರಿ. ದೇಶ ಎತ್ತ ಸಾಗುತ್ತಿದೆ ಎಂಬುದು ಪ್ರಶ್ನೆಯಲ್ಲ. ಈ ವಿದ್ಯಾರ್ಥಿನಿಯ ಮನಸ್ಥಿತಿ ಎತ್ತ ಸಾಗುತ್ತಿದೆ ಎಂಬುದು ಆತಂಕಕಾರಿ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಹಿಜಾಬ್ ಹೆಸರಲ್ಲಿ ಕೆಲವು ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುದಿಲ್ಲ ಎಂದು ಸೆಡ್ಡು ಹೊಡೆದಿದ್ದಾರೆ. ಈ ವಿದ್ಯಾರ್ಥಿಗಳ ಹಿಂದೆ ಯಾರಿದ್ದಾರೆ ಎಂದು ಗಮನಿಸಬೇಕು. ಸರಕಾರ ಹೈಕೋರ್ಟ್ ಆದೇಶ ಪಾಲನೆ ಮಾಡುತ್ತಿದೆ. ಸರಕಾರದ ಆದೇಶಕ್ಕೆ ವಿದ್ಯಾರ್ಥಿನಿಯರು ಗೌರವ ಕೊಡುತ್ತಿಲ್ಲ ಎಂದು ಸಚಿವ ಕೋಟ ಹೇಳಿದ್ದಾರೆ.
ಅಲ್ಲದೇ ಈ ವಿದ್ಯಾರ್ಥಿನಿಯರ ಮನಸ್ಥಿತಿ ಎತ್ತ ಸಾಗುತ್ತಿದೆ ಎಂದು ಗಂಭೀರವಾಗಿ ಆಲೋಚನೆ ಮಾಡಬೇಕು. ಸಂವಿಧಾನದ ಆದೇಶ ಪಾಲಿಸುವುದು ಆ ವಿದ್ಯಾರ್ಥಿನಿಯರ ಕರ್ತವ್ಯ ಮತ್ತು ಜವಾಬ್ದಾರಿ. ಈ ರೀತಿ ಸೆಡ್ಡು ಹೊಡೆದರೆ ಕಾನೂನು ತನ್ನದೇ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.