ಬೆಳ್ತಂಗಡಿ : ಉರಗ ತಜ್ಞ ಸ್ನೇಕ್ ಅಶೋಕ್ ಲಾಯಿಲ ಅವರು ನಾಗರಹಾವೊಂದನ್ನು ಹಿಡಿಯಲು ಮುಂದಾದಾಗ ಹಾವು ಅವರ ಮೇಲೆ ದಾಳಿಗೆ ಮುಂದಾದ ಘಟನೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನಂದಿಬೆಟ್ಟ ಸಮೀಪ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನಂದಿಬೆಟ್ಟ ಸಮೀಪದ ಡೀಕಯ್ಯ ಎಂಬವರ ಮನೆಯ ಕೋಳಿ ಗೂಡಿಗೆ ನಾಗರ ಹಾವು ನುಗ್ಗಿ ಎರಡು ಕೋಳಿಗೆ ಕಚ್ಚಿ ಸಾಯಿಸಿತ್ತು. ಇದರಿಂದ ಗಾಬರಿಗೊಂಡ ಮನೆ ಮಂದಿ ಇಂದು ಮಧ್ಯಾಹ್ನ ಬೆಳ್ತಂಗಡಿಯ ಸ್ನೇಕ್ ಅಶೋಕ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿ ಮನೆಗೆ ಕರೆಸಿದ್ದಾರೆ.
ಸುಮಾರು 5 ಅಡಿ ಇದ್ದ ನಾಗರ ಹಾವವನ್ನು ಹಿಡಿಯುವ ವೇಳೆ ಹೊರಬಂದ ನಾಗರಹಾವು ಸ್ನೇಕ್ ಅಶೋಕ್ ಗೆ ತಡೆಗೆ ಹಾರಿ ಬಂದು ಕಚ್ಚಲು ಮುಂದಾಗಿದೆ. ಈ ವೇಳೆ ಅವರು ತನ್ನ ಕೈಯಲ್ಲಿದ್ದ ಕೋಲಿನಿಂದ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಹಾವನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಸ್ನೇಕ್ ಅಶೋಕ್ ಹಾವು ಹಿಡಿಯುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ.
ಕಳೆದ ಬಾರಿ ಕೂಡ ಸ್ನೇಕ್ ಅಶೋಕ್ ಅವರು ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಮನೆಯೊಂದರ ಶೌಚಾಲಯದಲ್ಲಿದ್ದ ಕಾಳಿಂಗ ಸರ್ಪ ಹಿಡಿಯುವ ವೇಳೆ ಹಾರಿ ಬಂದು ಕಚ್ಚಲು ಯತ್ನಿಸಿದ್ದ ವಿಡಿಯೋ ಕೂಡ ಸಕತ್ ವೈರಲ್ ಅಗಿ ದೇಶಾದ್ಯಂತ ಪರಿಸರ ಪ್ರೇಮಿಗಳು ತಮ್ಮ ಟ್ವಿಟರ್ ಮೂಲಕ ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.