ಬೆಂಗಳೂರು: ಬಾಂಗ್ಲಾ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಆರೋಪಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಶೂಬೂಜ್ ಎಂಬುವವನ ಮೇಲೆ ಪೊಲೀಸರು ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ. ಪೊಲೀಸರು ಆರೋಪಿ ಶೂಬೂಜ್ ಬಂಧನಕ್ಕೆ ತೆರಳಿದ್ದ ವೇಳೆ ಆತ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಇಂದು ಬೆಳಗಿನ ಜಾವ ಅರೋಪಿ ಬಂಧನಕ್ಕೆ ಪೊಲೀಸರು ತೆರಳಿದ್ದರು. ಬಂಧನಕ್ಕೆ ಒಳಗಾಗುವಂತೆ ಆರೋಪಿಗೆ ಹೇಳಿದ್ದಾರೆ. ಆದರೆ ಪೊಲೀಸರ ಮಾತನ್ನು ಕೇಳದ ಶೂಬೂಜ್ ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ. ಈ ವೇಳೆ ಪಿಎಸ್ಐ ಶಿವರಾಜ್ ಮತ್ತು ದೇವೇಂದ್ರ ನಾಯಕ್ಗೆ ಗಾಯವಾಗಿದೆ. ಶರಣಾಗಲು ಪೊಲೀಸರು ತಿಳಿಸಿದರೂ ಕೇಳದ ಹಿನ್ನೆಲೆ ಆರೋಪಿಯ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ರಾಂಪುರ ಬಳಿಯಲ್ಲಿ ಈ ಘಟನೆ ನಡೆದಿದ್ದು, ಕೆ.ಆರ್.ಪುರಂ ಠಾಣಾ ವ್ಯಾಪ್ತಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಪೊಲೀಸರು ಪೇಪರ್ ಆಯುವವರ ಶೆಡ್ನಲ್ಲಿ ಆರೋಪಿ ಇರುವ ಮಾಹಿತಿ ಕಲೆ ಹಾಕಿದ್ದರು. ಆರೋಪಿಯನ್ನು ಜೀಪ್ನಲ್ಲಿ ಕೂರಿಸಿಕೊಂಡಾಗ ಮೂತ್ರ ವಿಸರ್ಜನೆಗೆ ಹೋಗಬೇಕು ಎಂದಿದ್ದಾನೆ. ನಂತರ ಕೆಳಗೆ ಇಳಿಸಿದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಹಿಡಿಯಲು ಹೋದ ಪೊಲೀಸರಿಗೆ ಚಾಕುವಿನಿಂದ ಇರಿದಿದ್ದಾನೆ. ಪಿಎಸ್ಐ ಶಿವರಾಜ್ ಎಡಗೈಗೆ ಮತ್ತು ದೇವೇಂದ್ರ ನಾಯಕ್ ಬಲಗೈಗೆ ಗಾಯವಾಗಿದೆ. ಬಳಿಕ ಓಡಲು ಯತ್ನಿಸಿದಾಗ ಪೊಲೀಸರು ಆರೋಪಿ ಕಾಲಿಗೆ ಫೈರಿಂಗ್ ಮಾಡಿ ಬಂಧಿಸಿದ್ದಾರೆ.