Saturday, May 4, 2024
Homeತಾಜಾ ಸುದ್ದಿಕಾಂಗ್ರೆಸ್ ನಾಯಕರ ವಿರುದ್ಧ ಸಿಡಿದೆದ್ದ ರಮ್ಯಾ ಕಿಡಿ: ಡಿಕೆಶಿ ವಿರುದ್ಧ ನಟಿ ರಮ್ಯಾ ಸಾಲು ಸಾಲು...

ಕಾಂಗ್ರೆಸ್ ನಾಯಕರ ವಿರುದ್ಧ ಸಿಡಿದೆದ್ದ ರಮ್ಯಾ ಕಿಡಿ: ಡಿಕೆಶಿ ವಿರುದ್ಧ ನಟಿ ರಮ್ಯಾ ಸಾಲು ಸಾಲು ಟ್ವೀಟ್‌

spot_img
- Advertisement -
- Advertisement -

ಬೆಂಗಳೂರು: ಕಾಂಗ್ರೆಸ್‌ ಪಕ್ಷದ ನಾಯಕರ ವಿರುದ್ಧ ನಟಿ ರಮ್ಯಾ ಗರಂ ಆಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್ ವಿರುದ್ಧ ರಮ್ಯಾ, ಸಾಲು ಸಾಲು ಟ್ವೀಟ್‌ಗಳನ್ನು ಮಾಡುತ್ತಿದ್ದು, ಪಕ್ಷದ ರಾಜ್ಯ ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ತಾವು ಪಕ್ಷದ ಜವಾಬ್ದಾರಿಗಳನ್ನು ತ್ಯಜಿಸಿದ ಬಳಿಕ ತಮ್ಮ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಯಿತು ಎಂದು ರಮ್ಯಾ ಆರೋಪಿಸಿದ್ದಾರೆ.

“ನಾನು ರಾಜೀನಾಮೆ ನೀಡಿದ ಬಳಿಕ, ‘ಆಕೆ ಕಾಂಗ್ರೆಸ್‌ಗೆ 8 ಕೋಟಿ ರೂ ವಂಚಿಸಿ ಪರಾರಿಯಾಗಿದ್ದಾಳೆ’ ಎಂಬ ಸುದ್ದಿಯನ್ನು ಸೃಷ್ಟಿಸಲಾಯಿತು. ಮುಖ್ಯವಾಗಿ ನನ್ನ ವಿಶ್ವಾಸಾರ್ಹತೆಯನ್ನು ನಾಶಪಡಿಸುವ ಪ್ರಯತ್ನವಾಗಿ ಕನ್ನಡ ಸುದ್ದಿ ವಾಹಿನಿಗಳಲ್ಲಿ ಬಿತ್ತಿದ ಸುದ್ದಿಯಿದು. ನಾನು ಓಡಿ ಹೋಗಿರಲಿಲ್ಲ. ನಾನು ನನ್ನ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದೆ. ನಾನು ನಿಜಕ್ಕೂ ಪಕ್ಷಕ್ಕೆ ಎಂಟು ಕೋಟಿ ರೂ ವಂಚನೆ ಮಾಡಿಲ್ಲ. ನಾನು ಮಾಡಿದ ತಪ್ಪು ಎಂದರೆ ಮೌನವಾಗಿ ಇದ್ದದ್ದು” ಎಂದು ನಟಿ, ರಾಜಕಾರಣಿ ರಮ್ಯಾ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿನ ಸೋಲಿನ ಬಳಿಕ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದ ರಮ್ಯಾ ಅವರ ಕುರಿತು ಅನೇಕ ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ರಮ್ಯಾ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮನ್ನು ಟ್ರೋಲ್ ಮಾಡುವಂತೆ ಪಕ್ಷದ ನಾಯಕರೇ ಸೂಚನೆ ನೀಡಿದ್ದಾರೆ ಎಂಬ ವಿಚಾರದಲ್ಲಿ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರ ರಕ್ಷಣೆ ಕೋರಿದ್ದಾರೆ.

ಕೆಸಿ ವೇಣುಗೋಪಾಲ್ ಅವರಿಗೆ ನನ್ನ ವಿನಮ್ರ ಮನವಿ, ನೀವು ಮುಂದಿನ ಬಾರಿ ಕರ್ನಾಟಕಕ್ಕೆ ಯಾವಾಗ ಬರುತ್ತೀರೋ ಆಗ ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿ. ವೇಣುಗೋಪಾಲ್ ಅವರೇ, ನೀವು ನನಗಾಗಿ ಮಾಡಬಹುದಾದ ಕನಿಷ್ಠ ಸಂಗತಿ ಇದು. ಇದರಿಂದ ನಾನು ಈ ನಿಂದನೆ ಮತ್ತು ಟ್ರೋಲ್‌ಗಳೊಂದಿಗೆ ನನ್ನ ಉಳಿದ ಜೀವನವನ್ನು ಬದುಕುವ ಸ್ಥಿತಿ ಇರುವುದಿಲ್ಲ” ಎಂದು ಅವರು ಹೇಳಿದ್ದಾರೆ.

ತಮ್ಮ ವಿರುದ್ಧ ಟ್ರೋಲ್ ಅಭಿಯಾನ ನಡೆಸಲು ಪಕ್ಷದ ನಾಯಕರು ಕಾರ್ಯಕರ್ತರಿಗೆ ನೀಡಿರುವ ಅಂಶಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ರಮ್ಯಾ, “ನನ್ನನ್ನು ಟ್ರೋಲ್ ಮಾಡುವಂತೆ ‘ಕಚೇರಿ’ಯು ಈ ಸಂದೇಶಗಳನ್ನು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಿಗೆ ಹಂಚಿಕೊಂಡಿದೆ. ನೀವು ಆ ತೊಂದರೆ ತೆಗೆದುಕೊಳ್ಳುವುದು ಬೇಡ. ನನ್ನನ್ನು ನಾನೇ ಟ್ರೋಲ್ ಮಾಡಿಕೊಳ್ಳುತ್ತೇನೆ” ಎಂದಿದ್ದಾರೆ. ‘ಕಚೇರಿ’ ಎಂದರೆ ಗೌರವಾನ್ವಿತ ಅಧ್ಯಕ್ಷ ಡಿಕೆ ಶಿವಕುಮಾರ್ ನಾಯಕತ್ವದ ಕೆಪಿಸಿಸಿ ಎಂದು ಅವರು ಟಾಂಗ್ ನೀಡಿದ್ದಾರೆ.

ತಮಗೆ ಅವಕಾಶ ನೀಡಿದ್ದು, ಜತೆಯಾಗಿ ನೀಡಿದ್ದು ಯಾರಾದರೂ ಇದ್ದರೆ ಅದು ರಾಹುಲ್ ಗಾಂಧಿ. ತಮಗೆ ಅವಕಾಶ ನೀಡಿದ್ದಾಗಿ ಯಾರಾದರೂ ಹೇಳಿಕೊಂಡರೆ ಅವರು ಅವಕಾಶವಾದಿ ಮಾತ್ರ. ಇವು ಹಿಂದಿನಿಂದ ಇರಿಯುವವರು ಎಂದು ರಮ್ಯಾ ವಾಗ್ದಾಳಿ ನಡೆಸಿದ್ದಾರೆ.

“ನನಗೆ ಅವಕಾಶಗಳನ್ನು ನೀಡಿ ಮತ್ತು ನನ್ನ ಜತೆಗೆ ನಿಂತವರು ಯಾರಾದರೂ ಇದ್ದರೆ ಅದು ರಾಹುಲ್ ಗಾಂಧಿ. ನನಗೆ ಅವಕಾಶಗಳನ್ನು ‘ಕೊಟ್ಟಿರುವುದಾಗಿ’ ಯಾರೇ ಹೇಳಿಕೊಂಡರೂ ಅವರು ಅವಕಾಶವಾದಿ. ಈ ಅವಕಾಶವಾದಿಗಳು ಕೇವಲ ಹಿಂದಿನಿಂದ ಚೂರಿ ಹಾಕುವವರು ಮತ್ತು ನನ್ನನ್ನು ಹತ್ತಿಕ್ಕಲು ಪ್ರಯತ್ನಿಸಿದವರು. ನೀವು ಟಿವಿಯಲ್ಲಿ ನೋಡುತ್ತಿರುವುದೆಲ್ಲವೂ ತಮ್ಮ ಮೋಸದ ಮನಸ್ಥಿತಿಯನ್ನು ಅಡಗಿಸಿಡುವ ಪ್ರಹಸನ” ಎಂದು ಕಿಡಿಕಾರಿದ್ದಾರೆ.

- Advertisement -
spot_img

Latest News

error: Content is protected !!