ಮಂಗಳೂರು: ಮುಂಬೈನಿಂದ ಮಂಗಳೂರಿಗೆ ಬರುತ್ತಿದ್ದ ರೈಲಿನಲ್ಲಿ ಕಳೆದುಹೋಗಿದ್ದ ಚಿನ್ನಾಭರಣಗಳಿದ್ದ ಟ್ರಾಲಿ ಬ್ಯಾಗ್ ನ್ನು ಪೊಲೀಸರು ಪತ್ತೆ ಹಚ್ಚಿ ವರಸುದಾರರಿಗೆ ಒಪ್ಪಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಫೆ.27ರಂದು ರವೀಂದ್ರ ಎಂ.ಶೆಟ್ಟಿ ಮತ್ತು ಅವರ ಪತ್ನಿ ಶಶಿಕಲಾ ಶೆಟ್ಟಿ ಅವರು ಮುಂಬೈನಿಂದ ಮಂಗಳೂರಿಗೆ ರೈಲಿನಲ್ಲಿ ಬರುತ್ತಿದ್ದಾಗ ಸುರತ್ಕಲ್ನಿಂದ ಮಂಗಳೂರು ನಡುವೆ ಅವರ ಟ್ರಾಲಿ ಬ್ಯಾಗ್ ಕಳೆದು ಹೋಗಿತ್ತು. ಕಳವಾಗಿರುವ ಬಗ್ಗೆ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆಗೆ ಮಂಗಳೂರು ರೈಲ್ವೆ ಪೊಲೀಸ್ ನಿರೀಕ್ಷಕ ಮೋಹನ್ ಕೊಟ್ಟಾರಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ರೈಲ್ವೆ ಪೊಲೀಸ್ ಅಧೀಕ್ಷಕಿ ಡಾ.ಸೌಮ್ಯಲತಾ ಎಸ್.ಕೆ, ಉಪಾಧೀಕ್ಷಕ ಗೀತಾ ಸಿ.ಆರ್. ಅವರ ಮಾರ್ಗದರ್ಶನದಂತೆ ಕಾರ್ಯಾಚರಣೆ ನಡೆಸಲಾಗಿತ್ತು. ಇನ್ನು ಈ ವಿಶೇಷ ತಂಡವು ರೈಲ್ವೆ ಸಿಬ್ಬಂದಿಯೊಂದಿಗೆ ಟ್ರ್ಯಾಕ್ ಪ್ಯಾಟ್ರೋಲಿಂಗ್ ನಡೆಸುವಾಗ ಕುಲಶೇಖರ ಸುರಂಗ ಬಳಿ ತಿರುವಿನಲ್ಲಿ ರೈಲು ಹಳಿ ಸಮೀಪ ಟ್ರಾಲಿ ಬ್ಯಾಗ್ ಪತ್ತೆಯಾಗಿದೆ.
ಬ್ಯಾಗ್ನಲ್ಲಿ 245 ಗ್ರಾಂ ತೂಕದ ವಜ್ರದ ಮತ್ತು ಚಿನ್ನದ ಆಭರಣಗಳು ಸೇರಿದಂತೆ ಅಂದಾಜು ಸುಮಾರು 8,57,500 ರೂ. ಮೌಲ್ಯದ ಸೊತ್ತುಗಳಿದ್ದು, ತನಿಖೆ ಮುಂದುವರೆಸಲಾಗಿದೆ.