ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ಅವರ ಸಿಸಿಬಿ ಕಸ್ಟಡಿ ಅವಧಿ ಇಂದಿಗೆ ಮುಕ್ತಾಯವಾಗಲಿದೆ. ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು. ರಾಗಿಣಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಅವರಿಗೆ ಜಾಮೀನು ಸಿಗದಿದ್ದರೆ ಮತ್ತೆ ಸಿಸಿಬಿ ವಿಚಾರಣೆ ಎದುರಿಸಬೇಕಿದೆ.
ಪ್ರಕರಣದಲ್ಲಿ ಬಂಧಿತನಾಗಿರುವ 7ನೇ ಆರೋಪಿ ಲೂಮ್ ಪೆಪ್ಪರ್ ಸಾಂಬಾ ರಾಗಿಣಿಗೆ ಡ್ರಗ್ಸ್ ಪೂರೈಕೆ ಮಾಡಿರುವುದಾಗಿ ಹೇಳಿದ್ದಾನೆನ್ನಲಾಗಿದೆ. ಇಂದಿಗೆ ರಾಗಿಣಿ ಸಿಸಿಬಿ ಕಸ್ಟಡಿ ಅವಧಿ ಮುಗಿಯಲಿದ್ದು ಜಾಮೀನು ಸಿಗದಿದ್ದರೆ ರಾಗಿಣಿ ಜೈಲಿಗೆ ಹೋಗಲಿದ್ದಾರೆ ಎಂದು ಹೇಳಲಾಗಿದೆ. ಕೋರ್ಟ್ ಸಿಸಿಬಿ ಮನವಿ ಪುರಸ್ಕರಿಸಿ ಕಸ್ಟಡಿಗೆ ರಾಗಿಣಿಯನ್ನು ಇನ್ನಷ್ಟು ದಿನ ನೀಡಬಹುದು ಇಲ್ಲವೇ, ಇಷ್ಟು ದಿನ ಕಸ್ಟಡಿಗೆ ನೀಡಿದ್ದು ಸಾಕು ಎಂದು ತೀರ್ಮಾನಿಸಿ ನ್ಯಾಯಾಂಗ ಬಂಧನ(ಜೈಲಿಗೆ)ಕ್ಕೆ ಕಳಿಸುವ ಸಾಧ್ಯತೆ ಇದೆ.
ಮತ್ತೊಂದೆಡೆ, ಬೆಂಗಳೂರಿನ 33ನೇ ಸಿಸಿಎಚ್ ನ್ಯಾಯಾಲಯದಲ್ಲಿ ರಾಗಿಣಿ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಮುಂಬೈನಿಂದ ಬಂದಿರುವ ವಕೀಲರು ರಾಗಿಣಿ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಲಿದ್ದು, ಜಾಮೀನು ನೀಡುವಂತೆ ಮನವಿ ಮಾಡಲಿದ್ದಾರೆ.
ರಾಗಿಣಿ ಸೇರಿದಂತೆ 14 ಆರೋಪಿಗಳ ವಿರುದ್ಧ ಎನ್ಡಿಪಿಎಸ್ ಆಕ್ಟ್ನ್ ಸೆಕ್ಷನ್ 21, 21ಸಿ, 27ಎ, 27ಬಿ, 29, ಐಪಿಸಿ 120ಬಿ ಅಡಿ ಎಫ್ಐಆರ್ ದಾಖಲಾಗಿದೆ. ಈ ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿರುವ ಕಾರಣ ಕೆಳ ಹಂತದ ನ್ಯಾಯಾಲಯದಲ್ಲಿ ಜಾಮೀನು ಸಿಗುವುದು ಕಷ್ಟ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.
ಆದರೆ, ರಾಗಿಣಿ ಪರ ವಕೀಲರು ಜಾಮೀನು ಸಿಗುವ ವಿಶ್ವಾಸದಲ್ಲಿದ್ದಾರೆ. ರಾಗಿಣಿ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಸಿದಂತೆ ಸಿಸಿಬಿ ಪೊಲೀಸರ ಬಳಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ರಾಗಿಣಿಗೆ ಸುಲಭವಾಗಿ ಜಾಮೀನು ಸಿಗಲಿದೆ ಎಂದು ಹೇಳಿದ್ದಾರೆ.