ಪುತ್ತೂರು: ಸೀಟ್ ಬೆಲ್ಟ್ ಧರಿಸಿಲ್ಲ ಅಂತಾ ಸ್ಕೂಟರ್ ಸವಾರನೊಬ್ಬನಿಗೆ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ದಂಡ ಹಾಕಿದ ವಿಚಿತ್ರ ಪ್ರಸಂಗವೊಂದು ಪುತ್ತೂರಿನಲ್ಲಿ ನಡೆದಿದೆ. ಅದರಲ್ಲೂ 2021 ರ ರಶೀದಿ ನೀಡಿ ಪೊಲೀಸರು ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ..
ಮಾರ್ಚ್ 17 ರಂದು ಕೊಡಿಪ್ಪಾಡಿ ನಿವಾಸಿ ಬೆಳಿಯಪ್ಪ ಗೌಡ ಎಂಬವರು ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಪೊಲೀಸರು ಅವರ ಸ್ಕೂಟರ್ ನ್ನು ನಿಲ್ಲಿಸಿ ದಾಖಲೆ ಪತ್ರ ಪರಿಶೀಲಿಸಿ ನಂಬರ್ ಪ್ಲೇಟ್ ಸರಿ ಇಲ್ಲ ಎಂದು 500 ರೂಪಾಯಿ ದಂಡ ಹಾಕಿ, ರಶೀದಿ ನೀಡಿದ್ದಾರೆ. ಆ ರಶೀದಿಯಲ್ಲಿ ವಿತ್ ಔಟ್ ಸೀಟ್ ಬೆಲ್ಟ್ ಎಂದು ಬರೆಯಲಾಗಿತ್ತು. ಅದಲ್ಲದೇ 23-02-2021 ಎಂದು ದಿನಾಂಕ ನಮೂದಿಸಲಾಗಿತ್ತು. ಈ ಬಗ್ಗೆ ಎಸ್.ಐ ಅವರಲ್ಲಿ ವಿಚಾರಿಸಿದಾಗ ಅವರು ಸರಿಯಾಗಿ ಪ್ರತಿಕ್ರಿಯೆ ನೀಡಲಿಲ್ಲ.
ಇದನ್ನು ಬೆಳಿಯಪ್ಪ ಗೌಡ ಅವರು ತಮ್ಮ ಪರಿಚಯದ ನಗರಸಭಾ ಸದಸ್ಯರೊಬ್ಬರ ಗಮನಕ್ಕೆ ತಂದಿದ್ದಾರೆ. ಅವರು ಈ ಬಗ್ಗೆ ವಿಚಾರಿಸಲೆಂದು ಮಹಿಳಾ ಠಾಣೆಗೆ ತೆರಳಿದ್ದಾರೆ. ಆಗ ನಗರಸಭಾ ಸದಸ್ಯ ಹಾಗೂ ಎಸ್.ಐ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ. ಬಳಿಕ ನಗರ ಠಾಣೆಯ ಇನ್ಸ್ ಪೆಕ್ಟರ್ ಸುನೀಲ್ ಅವರು ಆಗಮಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ.