ಪುತ್ತೂರು. ಪುತ್ತೂರು ನಾಗರಿಕರ ಬಹು ನಿರೀಕ್ಷಿತ ಎಪಿಎಂಸಿ ರೈಲ್ವೇ ಅಂಡರ್ ಪಾಸ್ ಕಾಮಗಾರಿಗೆ ಶಿಲಾನ್ಯಾಸ ಕಾರ್ಯ ಇಂದು ನಡೆಸಲಾಯಿತು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅಂಡರ್ ಪಾಸ್ ಕಾಮಗಾರಿಗೆ ಶಿಲಾನ್ಯಾಸ ಕಾರ್ಯ ನೆರವೇರಿಸಿದರು. ಸುಮಾರು 13.60 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದ್ದು, ರೈಲ್ವೇ ಇಲಾಖೆ ಈ ಕಾಮಗಾರಿಯನ್ನು ನಿರ್ವಹಿಸಲಿದ್ದು, ರಾಜ್ಯ ಸರಕಾರ ಕಾಮಗಾರಿಯ ಅರ್ಧ ಅನುದಾನವನ್ನು ನೀಡಲಿದೆ.
ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಡಿ.ವಿ.ಸದಾನಂದ ಗೌಡ, ಎಪಿಎಂಸಿ ರೈಲ್ವೇ ಅಂಡರ್ ಪಾಸ್ ನಿರ್ಮಿಸುವ ಕನಸವನ್ನು ಶಾಸಕನಾಗಿರುವ ಸಂದರ್ಭದಲ್ಲೇ ಕಾಣಲಾಗಿತ್ತು. ಇದೀಗ ಈ ಕಾಮಗಾರಿಗೆ ಚಾಲನೆ ನೀಡುವ ದಿನ ಬಂದಿರುವುದು ಸಂತಸ ತಂದಿದೆ ಅಂದ್ರು. ಹಾಗೇ ಈ ಕಾಮಗಾರಿ ನಡೆಸಲು ಸಂಸದ ನಳಿನ್ ಕುಮಾರ್ ಕಟೀಲ್ ಜೊತೆ ಹಲವು ಬಾರಿ ಕೇಂದ್ರ ರೈಲ್ವೇ ಸಚಿವರನ್ನು ಭೇಟಿ ಮಾಡಿದ್ದು, ಕೊನೆಗೂ ಈ ಕಾಮಗಾರಿಗೆ ಸುದಿನ ಮೂಡಿ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸಂಜೀವ ಮಠಂದೂರು, ಪ್ರತಾಪ್ ಸಿಂಹ ನಾಯಕ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.