ಡೆಹ್ರಾಡೂನ್: ದಿಢೀರನೆ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ಉತ್ತರಾಖಂಡದ ಪೂರ್ಣಗಿರಿ ಜನಶತಾಬ್ದಿ ಎಕ್ಸ್ಪ್ರೆಸ್ ಸುಮಾರು 35 ಕಿಲೋ ಮೀಟರ್ವರೆಗೂ ಹಿಮ್ಮುಖವಾಗಿ ಚಲಿಸಿದ ಸಂಗತಿ ನಡೆದಿದೆ.
ಉತ್ತರಾಖಂಡದ ಈ ಎಕ್ಸ್ಪ್ರೆಸ್ ರೈಲು( ಗಾಡಿ ಸಂಖ್ಯೆ: 05326) ದೆಹಲಿಯಿಂದ ಪಿಲಿಭಿಟ್ ಮಾರ್ಗವಾಗಿ ತಾನಕ್ಪುರ್ಗೆ ಚಲಿಸುತ್ತಿತ್ತು. ತಾನಕ್ಪುರ್ ಸಮೀಪಿಸುತ್ತಿದ್ದಂತೆ ರೈಲಿಗೆ ಹಸುಗಳು ಅಡ್ಡ ಬಂದಿವೆ, ಚಾಲಕ ದಿಢೀರ್ ಬ್ರೇಕ್ ಹಾಕಿದ್ದರಿಂದ ಎಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು, ರೈಲು ಮುಂದಕ್ಕೆ ಚಲಿಸುವ ಬದಲು ಹಿಮ್ಮುಖವಾಗಿ ಚಲಿಸಿದೆ.
ಕೂಡಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿಗಳು ರೈಲು ಚಲಿಸುತ್ತಿದ್ದ ಮಾರ್ಗದ ಎಲ್ಲಾ ಗೇಟ್ಗಳನ್ನು ಸಂಚಾರಕ್ಕೆ ಮುಕ್ತಗೊಳಿಸಿ ರೈಲು ನಿಲುಗಡೆಗೆ ಅವಕಾಶ ಕಲ್ಪಿಸಿದ್ದಾರೆ. ನಂತರ ಖಟಿಮಾ ನಿಲ್ದಾಣದಲ್ಲಿ ಹಳಿ ಮೇಲೆ ಮಣ್ಣು, ಹೊಟ್ಟು ಹಾಕಿ ರೈಲಿಗೆ ತಡೆಯೊಡ್ಡಲಾಗಿದೆ. ಎಲ್ಲ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ರೈಲು ನಿಂತ ಬಳಿಕ, ಪ್ರಯಾಣಿಕರನ್ನು ತನಕ್ಪುರಕ್ಕೆ ಬಸ್ ಮೂಲಕ ಕಳಿಸಲಾಗಿದೆ. ರೈಲು ಹಿಮ್ಮುಖವಾಗಿ ಚಲಿಸಿದೆ ಹೊರತು ಯಾರಿಗೂ ಯಾವುದೇ ಅಪಾಯವಾಗಲಿಲ್ಲ. ಲೋಕೋ ಪೈಲಟ್ ಮತ್ತು ಗಾರ್ಡ್ನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಈಶಾನ್ಯ ರೈಲ್ವೆ ಆಡಳಿತ ತಿಳಿಸಿದೆ.
ಕಳೆದ ಶನಿವಾರವೂ ದೆಹಲಿ-ಡೆಹ್ರಾಡೂನ್ ಶತಾಬ್ದಿ ಎಕ್ಸ್ಪ್ರೆಸ್ಗೆ ಬೆಂಕಿ ಬಿದ್ದಿತ್ತು. ಇದಾದ ವಾರದ ನಂತರ ನಡೆಯುತ್ತಿರುವ ಎರಡನೇ ಅವಘಡ ಇದಾಗಿದೆ.