ಚಂಡೀಗಡ: ಪಂಜಾಬ್ನಲ್ಲಿ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಭ್ರಷ್ಟಾಚಾರ ಆರೋಪ ಹೊತ್ತ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಇಂದು ಸಂಪುಟದಿಂದ ಕಿತ್ತುಹಾಕಲಾಗಿದೆ. ಸಿಂಗ್ಲಾ ವಿರುದ್ಧದ ಆರೋಪಕ್ಕೆ ಸಾಕಷ್ಟು ಪುರಾವೆಗಳು ಲಭ್ಯವಾದ ಕಾರಣ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಸಂಪುಟದಿಂದ ವಜಾಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಟೆಂಡರ್ಗಳ ಮೇಲೆ ಶೇ 1ರಷ್ಟು ಕಮಿಷನ್ ನೀಡುವಂತೆ ಸಿಂಗ್ಲಾ ಬೇಡಿಕೆ ಇರಿಸಿದ್ದರು ಎನ್ನಲಾಗಿದೆ. ಸಂಪುಟದಿಂದ ವಜಾಗೊಳಿಸಿದ ಕೆಲವೇ ಸಮಯದಲ್ಲಿ ಪಂಜಾಬ್ ಪೊಲೀಸರ ಭ್ರಷ್ಟಾಚಾರ ನಿಗ್ರಹ ದಳ ಅವರನ್ನು ಬಂಧಿಸಿದೆ. ಕೇವಲ 10 ದಿನಗಳ ಹಿಂದಷ್ಟೇ ಸಿಎಂ ಭಗವಂತ್ ಮಾನ್ ಅವರಿಗೆ ಸಿಂಗ್ಲಾ ವಿರುದ್ಧ ದೂರು ಬಂದಿತ್ತು. ದೇಶದ ಇತಿಹಾಸದಲ್ಲಿ ಮುಖ್ಯಮಂತ್ರಿಯೊಬ್ಬರು ತಮ್ಮದೇ ಪಕ್ಷದ ಸಂಪುಟ ಸಹೋದ್ಯೋಗಿ ವಿರುದ್ಧ ಈ ರೀತಿ ಕಠಿಣ ಕ್ರಮ ತೆಗೆದುಕೊಂಡಿರುವುದು ಇದು ಎರಡನೇ ಸಲವಾಗಿದೆ. ಇದಕ್ಕೂ ಮುನ್ನ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 2015ರಲ್ಲಿ ಭ್ರಷ್ಟಾಚಾರ ಆರೋಪದಲ್ಲಿ ತಮ್ಮ ಸಚಿವರೊಬ್ಬರನ್ನು ವಜಾಗೊಳಿಸಿದ್ದರು.
ಸಿಂಗ್ಲಾ ವಿರುದ್ಧ ಮುಖ್ಯಮಂತ್ರಿ ಕಚೇರಿಗೆ ಹತ್ತು ದಿನಗಳ ಹಿಂದೆ ಸರ್ಕಾರಿ ಅಧಿಕಾರಿಯೊಬ್ಬರು ದೂರು ಸಲ್ಲಿಸಿದ್ದರು. ಸಚಿವರ ಬಗ್ಗೆ ಯಾವುದೇ ಭಯಪಡುವ ಅಗತ್ಯವಿಲ್ಲ ಮತ್ತು ನಾನು ನಿಮ್ಮ ಜತೆಗೆ ಇರುತ್ತೇನೆ ಎಂದು ಅಧಿಕಾರಿಗೆ ಸಿಎಂ ಮಾನ್ ವೈಯಕ್ತಿಕ ಭರವಸೆ ನೀಡಿದ್ದರು ಎನ್ನಲಾಗಿದೆ. ಅಧಿಕಾರಿಯ ಸಹಾಯದಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಅದರಲ್ಲಿ ಸಚಿವರು ಮತ್ತು ಅವರ ಆಪ್ತರು ಶೇ 1ರಷ್ಟು ಕಮಿಷನ್ ಕೇಳುತ್ತಿರುವುದು ಬಯಲಾಗಿತ್ತು. ಕಾಲ್ ರೆಕಾರ್ಡಿಂಗ್ಗಳು ಮತ್ತು ಇತರೆ ಪುರಾವೆಗಳನ್ನು ಸಂಗ್ರಹಿಸಿದ ಬಳಿಕ, ಸಿಎಂ ಮಾನ್ ಕ್ರಮ ಕೈಗೊಂಡಿದ್ದಾರೆ. ಜತೆಗೆ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.