ಉಡುಪಿ: ಬೇಟೆಗಾರರ ಕೈಯಲ್ಲಿ ಬಂದೂಕು ನೋಡಿ ನಕ್ಸಲರು ಎಂದು ಜನ ಭಯಗೊಂಡ ಘಟನೆ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಶೆಡಿ ಮನೆಗ್ರಾಮದ ಅರಸಮ್ಮನಕಾನು ತೋಟದ ಮನೆ ಎಂಬಲ್ಲಿ . ಬೇಟೆಗೆಂದು ಬಂದ ಕಾರ್ಕಳ ಮೂಲದ ಆರೋಪಿಗಳಾದ ಸ್ಟಾನಿ ಸ್ಲೆವೀಸ್ ಪಾಯಸ್(50), ಕಾರ್ಕಳ ಆನೆಕೆರೆಯ ಮೋಹನ (46), ಕುಕ್ಕುಂದೂರು ಗ್ರಾಮದ ಮೇಲ್ವಿನ್ ಪ್ರಾಕ್ಸಿ ಡಿಸೋಜ(38), ಹೆಬ್ರಿ ಜೆಡ್ಡೋಳಿ ಅಕ್ಷಯ ಪೂಜಾರಿ (23) ಎಂಬವರು ಬಂದಿದ್ದಾದೆ. ಶೇಡಿಮನೆ ಗ್ರಾಮದ ಅರಸಿನಖಾನ್ ತೋಟದಮನೆ ವಾಸಿ ಸುಕುಮಾರ ಶೆಟ್ಟಿಯವರ ಮನೆಹತ್ತಿರ ನಿನ್ನೆ ತಡರಾತ್ರಿ ಏಕಾಏಕಿ ಬಂದೂಕಿನ ಗುಂಡಿನ ಶಬ್ದ ಕೇಳಿದ್ದು ಎಚ್ಚೆತ್ತ ಮನೆಯವರು ಹೊರಗೆ ಬಂದು ನೋಡಿದಾಗ ಅಲ್ಲಿ ನಾಲ್ವರು ಆಗಂತುಕರ ಸಂಚಾರ ಕಂಡು ಬಂದಿದೆ. ಈ ಪ್ರದೇಶ ನಕ್ಸಲ್ ಸೂಕ್ಷ್ಮ ಪ್ರದೇಶವಾದ್ದರಿಂದ ಸಹಜವಾಗಿ ಮನೆಯವರು ಆರಂಭದಲ್ಲಿ ಬೆದರಿ ಹೋಗಿದ್ದಾರೆ.
ಆದರೆ ನಂತರ ಅವರನ್ನು ವಿಚಾರಿಸಿದಾಗ ಆರೋಪಿಗಳು ಕೋವಿ ಸಹಿತ ಬೇಟೆಗೆ ಬಂದಿರುವ ವಿಚಾರ ತಿಳಿದು ಬಂದಿದೆ. ಅವರ ಬಳಿ ಡಿಬಿಬಿಎಲ್ ಬಂದೂಕು ಹಾಗೂ ಆರು ಸಜೀವ ಗುಂಡುಗಳು ಇದ್ದವು. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಇವರನ್ನು ವಶಕ್ಕೆ ಪಡೆದಿರುವ ಪೊಲೀಸರು ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.