ಉಡುಪಿ: ಜಿಲ್ಲಾ ಅಂಗವಿಕಲರು ಹಾಗೂ ಪಾಲಕರ ಒಕ್ಕೂಟ ಸಮಿತಿ, ದಿವ್ಯಾಂಗರ ರಕ್ಷಣ ಸಮಿತಿ, ಸಕ್ಷಮ ಸಂಸ್ಥೆ ಹಾಗೂ ವಿವಿಧ ಜಿಲ್ಲೆಯ ಸಂಘ-ಸಂಸ್ಥೆಗಳಿಂದ ವಿಕಲಚೇತನರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರದಂದು ವಿಕಲಚೇತನರು ಗಾಲಿಕುರ್ಚಿ, ಟ್ರಾಲಿ, ವಾಕರ್, ಹುನ್ನುಹುರಿ ಸಮಸ್ಯೆಯಿಂದ ಬಳುತ್ತಿದ್ದವರು ಹಾಸಿಗೆ ಸಮೇತರಾಗಿ ಬಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ತಮ್ಮ ನೋವನ್ನು ಜಿಲ್ಲಾಧಿಕಾರಿಗಳ ಎದುರು ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಮನವಿ ಸ್ವೀಕರಿಸಿ, ರಾಜ್ಯ ಸರಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ದಿವ್ಯಾಂಗರ ರಕ್ಷಣ ಸಮಿತಿಯ ಸಂಚಾಲಕ ವಿಜಯ ಕೊಡವೂರು, ಸುಮಾರು 13ರಿಂದ 15 ಸಾವಿರದಷ್ಟು ಅಂಗವಿಕಲರು ಜಿಲ್ಲೆಯಲ್ಲಿದ್ದಾರೆ. ಬೆನ್ನುಮೂಳೆ ಮುರಿದ 124 ರಷ್ಟು ಮಂದಿ ಮನೆಯಲ್ಲಿ ಹಾಸಿಗೆ ಹಿಡಿದಿದ್ದು, ಇವರೆಲ್ಲರಿಗೆ ಮನೆಗಳಲ್ಲಿಯೇ ವೈದ್ಯಕೀಯ ಸೇವೆ ಸಿಗಬೇಕು. ಅಂಗವಿಕಲರಿಗೆ ಶೇ.5ರಷ್ಟು ಮೀಸಲಿರುವ ಹಣ ದುರುಪಯೋಗವಾಗುತ್ತಿದೆ. ಈ ಅನುದಾನವನ್ನು ಅಂಗವಿಕಲರ ಕಲ್ಯಾಣಕ್ಕೆ ಬಳಸದೆ ಅಂಗವಿಕಲರ ಹೆಸರಲ್ಲಿ ರಸ್ತೆ ಅಭಿವೃದ್ಧಿ ಪಡಿಸಲು ಖರ್ಚು ಮಾಡಲಾಗುತ್ತಿದೆ. ಸರಕಾರವು ಅಂಗವಿಕಲರಿಗೆ ಈ ಹಿಂದಿನಿಂತೆಯೇ ವಿವಿಧ ಸವಲತ್ತುಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಅಧ್ಯಕ್ಷ ಮಂಜುನಾಥ ಹೆಬ್ಟಾರ್ ಮಾತನಾಡಿ, ‘ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿಯೂ ಲಸಿಕೆ ಸಿಗುವಂತಾಗಬೇಕು. ಹೀಮೊಫಿಯಾ ಚುಚ್ಚುಮದ್ದಿಗೆ ಅನುದಾನ ಕಾಯ್ದಿರಿಸಿ ಚುಚ್ಚುಮದ್ದು ಸದಾಕಾಲ ಲಭ್ಯವಿರುವಂತೆ ಮಾಡಬೇಕು,’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಕುಂದಾಪುರ-ಬೈಂದೂರು ತಾಲೂಕು ಸಮಿತಿ ಅಧ್ಯಕ್ಷ ಸಂತೋಷ ಜಾಲಾಡಿ, ಗೌರವಾಧ್ಯಕ್ಷ ವೆಂಕಟೇಶ್ ಕೋಣಿ, ಪ್ರಮುಖರಾದ ರವೀಂದ್ರ, ಲತಾ ಭಟ್, ಹರೀಶ್ ಶೆಟ್ಟಿ, ಪೃಥ್ವಿರಾಜ್ ಶೆಟ್ಟಿ, ಹರೀಶ್ ತೋಳ್ಪಾಡಿ ಉಪಸ್ಥಿತರಿದ್ದರು.