ಬೈಂದೂರು: ಹವಾಮಾನ ವೈಪರೀತ್ಯದ ಪರಿಣಾಮ ಅಲೆಗಳ ಏರಿಳಿತಕ್ಕೆ ಸಿಲುಕಿ ಮೀನುಗಾರಿಕಾ ದೋಣಿಯೊಂದು ಭಾಗಶಃ ಮುಳುಗಡೆಯಾಗಿದೆ. ದೋಣಿಯಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಲಾಗಿದೆ. ಈ ದುರ್ಘಟನೆ ಜಿಲ್ಲೆಯ ಶೀರೂರು ಎಂಬಲ್ಲಿ ಸಂಭವಿಸಿದೆ.
ಶೀರೂರಿನ ಮುಸ್ತಾಕ್ ಎಂಬುವರ ಬೀಬಿ ಅಮೀನ ಹೆಸರಿನ ಗಿಲ್ ನೆಟ್ ದೋಣಿಯಲ್ಲಿ ಐವರು ಮೀನುಗಾರರು ನಿನ್ನೆ ಮಧ್ಯಾಹ್ನ ಶೀರೂರಿನಿಂದ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಕಡಲಬ್ಬರಕ್ಕೆ ಸಿಲುಕಿ ದೋಣಿ ಎರಡು ಭಾಗವಾಗಿದೆ ಎಂದು ತಿಳಿದುಬಂದಿದೆ. ಇದರಲ್ಲಿ ಸಿಲುಕಿಕೊಂಡಿದ್ದ ಮೀನುಗಾರರು ತಕ್ಷಣ ವೈರ್ಲೆಸ್ ಮೂಲಕ ಸಂಬಂಧಪಟ್ಟರಿಗೆ ಮಾಹಿತಿ ನೀಡಿದ್ದಾರೆ.
ಅಪಾಯದಲ್ಲಿ ಸಿಲುಕಿದ್ದ ಬೋಟಿನಲ್ಲಿದ್ದ ಶೀರೂರು ಕಳುಹಿತ್ತು ಮುಷ್ತಾಕ್ (52), ಅಶ್ರಫ್ (37), ಶಬೀರ್ (50), ಗೌಸಿಯಾ ಮೊಹಲ್ಲಾದ ಅಬೂಬಕ್ಕರ್ (55), ಬೊಂಬ ಮೀರಾ (47) ಎಂಬುವರನ್ನು ರಕ್ಷಿಸಿ ತೀರಕ್ಕೆ ಕರೆದು ಕೊಂಡು ಬರಲಾಯಿತು ಎಂದು ತಿಳಿದುಬಂದಿದೆ. ದುರ್ಘಟನೆಯಿಂದ ಸುಮಾರು ಹತ್ತು ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.