ಉಡುಪಿ: ಸ್ಥಳೀಯ ಕುಚ್ಚಲು ಅಕ್ಕಿ ಯನ್ನು ಸಾರ್ವಜನಿಕ ಪಡಿತರ ವ್ಯವಸ್ಥೆ (ಪಿಡಿಎಸ್) ಯಡಿ ವಿತರಿಸಲು ಒಂದು ವರ್ಷದ ಮಟ್ಟಿಗೆ ಕೇಂದ್ರ ಸರಕಾರ ನೀಡಿರುವ ಅನುಮತಿ ಮುಗಿಯುತ್ತಿದ್ದು, ಮುಂದಿನ ಅವಧಿಗೆ ಹೊಸದಾಗಿ ಅನುಮತಿ ಪಡೆಯಬೇಕು. ಇಲ್ಲವಾದರೆ ಸ್ಥಳೀಯ ಕುಚ್ಚಲು ಅಕ್ಕಿ ವಿತರಣೆ ಕಷ್ಟವಾಗಲಿದೆ.
ಒಂದು ವರ್ಷದ ಅವಧಿಗೆ ಕೇಂದ್ರ ಸರಕಾರ ಸ್ಥಳೀಯ ಕುಚ್ಚಲು ಅಕ್ಕಿ ವಿತರಣೆಗೆ ಈ ಹಿಂದೆ ಅನುಮತಿ ಕಲ್ಪಿಸಿತ್ತು. ಅಷ್ಟು ಹೊತ್ತಿಗಾಗಲೇ ಉಭಯ ಜಿಲ್ಲೆಯಲ್ಲಿ ಭತ್ತದ ಕೋಲು ಪೂರ್ಣಗೊಂಡು ರೈತರು ಭತ್ತವನ್ನು ಮಾರಾಟ ಮಾಡಿದ್ದರು. ಭತ್ತ ಖರೀದಿ ಕೇಂದ್ರ ತೆರೆಯುವುದು ವಿಳಂಬವಾದ್ದರಿಂದ ಸರಕಾರ ಅನುಮತಿ ನೀಡಿದ್ದರೂ ಸ್ಥಳೀಯ ಕುಚ್ಚಲು ಅಕ್ಕಿ ವಿತರಣೆ ಸಾಧ್ಯವಾಗಿರಲಿಲ್ಲ.
ಉಡುಪಿ, ದಕ್ಷಿಣ ಕನ್ನಡಕ್ಕೆ ಪಿಡಿಎಸ್ನಲ್ಲಿ ವಿತರಣೆಗೆ ಪ್ರತೀ ತಿಂಗಳು ಕನಿಷ್ಠ 1 ಲಕ್ಷ ಕ್ವಿಂಟಾಲ್ ಅಕ್ಕಿ ಅಗತ್ಯ ಇಷ್ಟು ಪ್ರಮಾಣದಲ್ಲಿ ಈ ಜಿಲ್ಲೆಗಳಲ್ಲಿ ಉತ್ಪತ್ತಿ ಇಲ್ಲ. ಹೀಗಾಗಿ ಹೊರ ಜಿಲ್ಲೆ ಅಥವಾ ಹೊರ ರಾಜ್ಯದಿಂದ ಅಕ್ಕಿ ಪಡೆಯಬೇಕು. ಆಂಧ್ರಪ್ರದೇಶದಿಂದ ಬರುವ ಕುಚ್ಚಲು ಅಕ್ಕಿಯನ್ನು ಇಲ್ಲಿಯವರು ಇಷ್ಟಪಡುವುದಿಲ್ಲ. ಆದ್ದರಿಂದ ಕೇರಳ / ಮೈಸೂರು, ಬೆಳಗಾವಿ ಭಾಗದ ಎಂಒ4, ಜಯ, ಪಂಚಮುಖೀ, ಸಹ್ಯಾದ್ರಿ, ಉಮಾ, ಜ್ಯೋತಿ ಮತ್ತು ಕಜೆ ತಳಿಯ ಭತ್ತವನ್ನು ಖರೀದಿಸಿ ನೀಡಬೇಕಾಗುತ್ತದೆ. ಕಳೆದ ವರ್ಷ ಅನುಮತಿ ಪಡೆಯುವಾಗಲೇ ವಿಳಂಬವಾದ್ದರಿಂದ ಕುಚ್ಚಲು ಅಕ್ಕಿ ನೀಡಲು ಸಾಧ್ಯವಾಗಿರಲಿಲ್ಲ. ಈ ವರ್ಷವೂ ಅದನ್ನೇ ಮುಂದುವರಿಸಿದರೆ ಕರಾವಳಿಯ ಜನತೆಗೆ ಸ್ಥಳೀಯ ಕುಚ್ಚಲು ಅಕ್ಕಿ ಪಿಡಿಎಸ್ನಡಿ ಸಿಗಲಿದೆ ಎಂಬುದನ್ನೇ ಮರೆತು ಬಿಡಬೇಕಾಗುತ್ತದೆ.