ಉಡುಪಿ : ಪ್ರಯಾಣಿಕರನ್ನು ಬಸ್ ಗೆ ಹತ್ತಿಸಿಕೊಳ್ಳುವ ವಿಚಾರಕ್ಕೆ ರಾಡ್ ಹಿಡಿದುಕೊಂಡು ಖಾಸಗಿ ಬಸ್ ಸಿಬ್ಬಂದಿ ಜಗಳವಾಡಿರುವ ಘಟನೆ ಉಡುಪಿಯ ಕಾಪುವಿನಲ್ಲಿ ನಡೆದಿದೆ.
ಮಂಗಳೂರಿನಿಂದ ಉಡುಪಿಗೆ ಬರುತ್ತಿದ್ದ ಖಾಸಗಿ ಬಸ್ ಕೊಹಿನೂರು ಎಕ್ಸ್ ಪ್ರೆಸ್ ಹಾಗೂ ಟಿಎಂಟಿ ತನ್ವೀರ್ ಬಸ್ ಸಿಬ್ಬಂದಿ ನಡುವೆ ಟೈಮಿಂಗ್ ವಿಚಾರದಲ್ಲಿ ಗಲಾಟೆ ನಡೆದಿದೆ. ಬಸ್ ಗಳ ಟೈಮಿಂಗ್ ಫಾಲೋ ಮಾಡದ ಕಾರಣ ನಡುವೆ ರಸ್ತೆ ಕೊಹಿನೂರು ಬಸ್ ಅಡ್ಡಗಟ್ಟಿದ ತನ್ವೀರ್ ಟಿಎಂಟಿ ಬಸ್ ಚಾಲಕ ಇರ್ಷಾದ್ ಹಾಗೂ ನಿರ್ವಾಹಕ ಪವನ್ ನಿಂದ ಕೊಹಿನೂರು ಬಸ್ ಚಾಲಕ ಸಫಿಯುಲ್ಲಾ ಮೇಲೆ ಹಲ್ಲೆ ಯತ್ನಿಸಿದ್ದಾರೆ. ಅಲ್ಲದೆ ಎರಡೂ ಬಸ್ನ ಚಾಲಕ ಹಾಗು ನಿರ್ವಾಹಕರ ನಡುವೆ ಗಲಾಟೆ ನಡೆದು ಅವಾಚ್ಯ ಶಬ್ದಗಳಿಂದ ಪರಸ್ಪರ ನಿಂದಿಸಿದ್ದಾರೆ. ಬಸ್ಗೆ ರಾಡ್ನಿಂದ ಬಡಿಯುವ ದೃಶ್ಯ ವೈರಲ್ ಆಗಿದೆ.
ಎರಡು ಬಸ್ ಗಳಲ್ಲಿ ಪ್ರಯಾಣಿಕರು ಇರುವಾಗಲೇ ಅಜಾಗರೂಕತೆಯಿಂದ ಬಸ್ ಚಲಾಯಿಸಿದಲ್ಲದೇ, ಅಪಾಯಕಾರಿಯಾಗಿ ಅತೀ ವೇಗದಿಂದ ಬಸ್ ಓವರ್ ಟೇಕ್ ಮಾಡಿ ಅಡ್ಡಗಟ್ಟಿ ಗೂಂಡಾಗಿರಿ ತೋರಿದ್ದಾರೆ. ಸದ್ಯ ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಪು ಪೊಲೀಸ್ ಠಾಣೆಯಲ್ಲಿ ಎರಡು ಬಸ್ ನ ಚಾಲಕರು ದೂರು ದಾಖಲಿಸಿದ್ದಾರೆ. ಕಾಪು ಪೊಲೀಸರು ಎರಡು ಬಸ್ ಗಳಲ್ಲಿ ವಶಕ್ಕೆ ಪಡೆದಿದ್ದಾರೆ. ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿರು ಈ ಖಾಸಗಿ ಬಸ್ ಚಾಲಕರಿಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.