ಹೈದರಾಬಾದ್: ವಿವಾಹ ಸಮಾರಂಭ ನೆರವೇರಿಸಲು ಬಂದ ಪುರೋಹಿತನೇ ಮಂಗಳಸೂತ್ರ ಕದ್ದ ವಿಚಿತ್ರ ಘಟನೆಯೊಂದು ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ನಡೆದಿದೆ.
ಮೇದಕ್ ಜಿಲ್ಲೆಯ ಜ್ಞಾನೇಂದರ್ ದಾಸ್ಗೂ ತುಪ್ರಾನ್ ಮುನ್ಸಿಪಾಲಿಟಿಯಲ್ಲಿ ವಾಸವಿದ್ದ ಯುವತಿಗೂ ಮದುವೆ ನಿಶ್ಚಯವಾಗಿತ್ತು. ಅದಕ್ಕಾಗಿ ಗಜ್ವೆಲ್ ಮೂಲದ ಪುರೋಹಿತರನ್ನು ಆಯ್ಕೆ ಮಾಡಿಕೊಂಡಿದ್ದರು. ಅದರಂತೆಯೇ ಮದುವೆ ಸಂಭ್ರಮ ನಡೆಯುವಾಗ ಮಂತ್ರ ಹೇಳುತ್ತಲೇ ವಧು-ವರ ಮತ್ತು ಸಂಬಂಧಿಕರ ಗಮನವನ್ನು ಬೇರೆಡೆಗೆ ಸೆಳೆದು ಪುರೋಹಿತ ಮಂಗಳಸೂತ್ರವನ್ನು ಎತ್ತಿಕೊಂಡು ತನ್ನ ಜೇಬಿನಲ್ಲಿಟ್ಟುಕೊಂಡಿದ್ದಾನೆ. ಈ ದೃಶ್ಯವು ಅಲ್ಲಿಯೇ ವಿಡಿಯೋ ರೆಕಾರ್ಡಿಂಗ್ ಮಾಡುತ್ತಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದಾದ ಬಳಿಕ ವರ ತಾಳಿ ಕಟ್ಟಲು ಮುಂದಾದಾಗ ಮುಂದಿನ ವಿಧಾನಗಳನ್ನು ಅನುಸರಿಸದೇ ತರಾತುರಿಯಲ್ಲಿ ಪುರೋಹಿತ ಮದುವೆ ಮಂಟಪವನ್ನು ಖಾಲಿ ಮಾಡಿದ್ದಾನೆ. ಇತ್ತ ಪುರೋಹಿತರು ಹೋಗುತ್ತಿದ್ದಂತೆ ಅನುಮಾನ ಬಂದು ಪರಿಶೀಲನೆ ಮಾಡಿದಾಗ ಅಲ್ಲಿ ಮಂಗಳಸೂತ್ರ ನಾಪತ್ತೆಯಾಗಿರುವುದನ್ನು ನೋಡಿ ವಧು-ವರ ಶಾಕ್ ಆಗಿದ್ದಾರೆ.
ತಮ್ಮ ಅನುಮಾನ ನಿಜವಾದಾಗ ತಕ್ಷಣ ವಧು-ವರ ಪುರೋಹಿತರಿಗೆ ಕರೆ ಮಾಡಿದ್ದಾರೆ. ಆದರೆ, ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ತಕ್ಷಣ ಗಜ್ವೆಲ್ನಲ್ಲಿರುವ ಅವರ ಮನೆಗೆ ಹೋದಾಗ ಪುರೋಹಿತರ ತಾಯಿ ಉಡಾಫೆ ಉತ್ತರ ನೀಡಿದ್ದಾರೆ. ಇದಾದ ಬಳಿಕ ಮದುವೆ ರೆಕಾರ್ಡಿಂಗ್ ವಿಡಿಯೋವನ್ನು ವೀಕ್ಷಿಸಿದಾಗ ಪುರೋಹಿತನ ನಿಜಬಣ್ಣ ಬಯಲಾಗಿದೆ. ಬಳಿಕ ಸಂತ್ರಸ್ತರು ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಡಿಯೋ ತುಣುಕನ್ನು ವಶಕ್ಕೆ ಪಡೆದುಕೊಂಡು ತನಿಖೆ ಆರಂಭಿಸಿದ್ದಾರೆ. ಇತ್ತ ಪುರೋಹಿತರೊಬ್ಬರು ಮಂಗಳಸೂತ್ರವನ್ನೇ ಕಳ್ಳತನ ಮಾಡಿದ ಸುದ್ದಿ ಕೇಳಿ ಅನೇಕರು ಶಾಕ್ಗೆ ಒಳಗಾಗಿದ್ದಾರೆ.