ಬೆಂಗಳೂರು: 10 ವರ್ಷದ ಬಾಲಕಿಯ ಮೇಲೆ 62 ವರ್ಷದ ದೇವಸ್ಥಾನದ ಅರ್ಚಕನೊಬ್ಬ ಅತ್ಯಾಚಾರವೆಸಗಿದ ಘಟನೆ ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದಿದೆ. ಇದೀಗ ಆರೋಪಿ 62 ವರ್ಷದ ವೆಂಕಟರಮಣಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಸಂಜೆ 4-30ರ ವೇಳೆಗೆ ಅರ್ಚಕ ದೇವನಹಳ್ಳಿಯಲ್ಲಿರುವ ತನ್ನ ಮಗಳನ್ನು ಭೇಟಿ ಮಾಡಲು ಹೋಗಿದ್ದಾಗ, ಹೊರಗಡೆ 10 ವರ್ಷದ ಬಾಲಕಿ ಆಟವಾಡುತ್ತಿರುವುದನ್ನು ನೋಡಿದ್ದಾನೆ. ಬಳಿಕ ಆ ಬಾಲಕಿಯನ್ನು ತನ್ನ ಮಗಳ ಮನೆಗೆ ಆಮಿಷವೊಡ್ಡಿ ಕರೆದುಕೊಂಡು ಹೋಗಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.
ಇತ್ತ ಬಾಲಕಿ ಎಷ್ಟು ಹೊತ್ತಾದರೂ ಮನೆಗೆ ಬಾರದೇ ಇರೋದನ್ನು ಗಮನಿಸಿದ ಆಕೆಯ ಪೋಷಕರು ಅವಳನ್ನು ಹುಡುಕಾಡಿದ್ದಾರೆ. ಅವರು ಆರೋಪಿ ವೆಂಕಟರಮಣಪ್ಪ ಅವರ ಮಗಳ ಮನೆಯ ಸಮೀಪದಲ್ಲಿರುವ ದೇವಾಲಯಕ್ಕೆ ಹೋಗಿ ವಿಚಾರಿಸಿದ್ದಾರೆ.
ಆಗ ಅಲ್ಲೇ ಇದ್ದ ಹೂವಿನ ಮಾರಾಟಗಾರೊಬ್ಬರು ಬಾಲಕಿಯ ತಂದೆಗೆ, ನಿಮ್ಮ ಮಗಳು ವೆಂಕಟರಮಣಪ್ಪ ಅವರ ಮಗಳ ಮನೆಗೆ ಹೋಗಿದ್ದಾಗಿ ತಿಳಿಸಿದ್ದಾರೆ..
ಕೂಡಲೇ ಅರ್ಚಕನ ಮನೆ ಬಳಿಗೆ ಬಂದಿದ್ದಾರೆ ಬಾಲಕಿಯ ಪೋಷಕರು. ಇದೇ ವೇಳೆ ಬಾಲಕಿ ಮನೆಯಿಂದ ಹೊರ ಬಂದಿದ್ದಾಳೆ. ಪೋಷಕರನ್ನು ನೋಡಿದ ಕೂಡಲೇ ಆಕೆ ಜೋರಾಗಿ ಅಳುತ್ತಾ ನಡೆದಿದ್ದೆಲ್ಲವನ್ನು ಹೇಳಿದ್ದಾಳೆ. ಕೂಡಲೇ ಹೆತ್ತವರು ದೇವನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆಗ ಅತ್ಯಾಚಾರವೆಸಗಿರೋದು ಖಚಿತವಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಿನ್ನೆ ಆರೋಪಿ ವೆಂಕಟರಮಣಪ್ಪನನ್ನು ಬಂಧಿಸಿದ್ದಾರೆ. ಈ ವೇಳೆ ಆತ ಸತ್ಯ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.