ಕೇರಳ; ;ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಗರ್ಭಿಣಿ ಹಾಗೂ ಆಕೆಯ ಪತಿ ಸಜೀವ ದಹನವಾಗಿರುವ ಘಟನೆ ಕೇರಳದ ಕಣ್ಣೂರಿನ ಜಿಲ್ಲಾ ಸರಕಾರಿ ಆಸ್ಪತ್ರೆ ಬಳಿ ನಡೆದಿದೆ.
ಕುಟ್ಟಿಯತ್ತೂರು ಕರಂಬುವಿನ ಪ್ರಜಿತ್(32) ಮತ್ತು ಅವರ ಪತ್ನಿ ರೀಶಾ (26) ಮೃತ ದುರ್ದೈವಿಗಳು. ಇಬ್ಬರೂ ಕುಟ್ಟಿಯತ್ತೂರಿನಿಂದ ಜಿಲ್ಲಾ ಆಸ್ಪತ್ರೆಗೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ.
ಪ್ರಜಿತ್ ಮತ್ತು ರೀಶಾ ಇಬ್ಬರೂ ಕಾರಿನ ಮುಂದಿನ ಸೀಟ್ ನಲ್ಲಿ ಕುಳಿತಿದ್ದರು. ಕಾರಿನ ಹಿಂದಿನ ಸೀಟಿನಲ್ಲಿ ಮಗು ಸೇರಿದಂತೆ ಇನ್ನೂ ನಾಲ್ವರು ಪ್ರಯಾಣಿಕರಿದ್ದರು. ಬೆಂಕಿ ಹೊತ್ತಿಕೊಂಡಾಗ ಕಾರು ಚಲಾಯಿಸುತ್ತಿದ್ದ ಪ್ರಜಿತ್ ಹಿಂಬಾಗಿಲು ತೆರೆದು ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕರು ಪಾರಾಗಲು ಸಹಾಯ ಮಾಡಿದ್ದಾರೆ. ಆದರೆ ತಾವು ಪಾರಾಗಲು ಮುಂದಿನ ಬಾಗಿಲು ತೆರೆಯಲು ಯತ್ನಿಸಿ ವಿಫಲವಾಗಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಬೆಂಬಲದೊಂದಿಗೆ ಜಾಮ್ ಆಗಿದ್ದ ಮುಂಭಾಗದ ಬಾಗಿಲು ಒಡೆದಿದ್ದಾರೆ. ಆದರೆ, ಅಷ್ಟರಲ್ಲಿ ಪ್ರಜಿತ್ ಮತ್ತು ರೀಶಾ ಸಜೀವ ದಹನವಾಗಿದ್ದಾರೆ.