ಕೇರಳದಲ್ಲಿ ಗರ್ಭಿಣಿ ಆನೆಯೊಂದರ ಸಾವು ಪ್ರಕರಣ ವ್ಯಾಪಕ ಆಕ್ರೋಶ ಸೃಷ್ಟಿಸಿರುವ ನಡುವೆಯೇ ಹಿಮಾಚಲ ಪ್ರದೇಶದಲ್ಲಿ ಗರ್ಭಿಣಿ ಹಸುವೊಂದಕ್ಕೆ ಪಟಾಕಿಗಳು ತುಂಬಿದ್ದ ಗೋಧಿ ಹಿಟ್ಟನ್ನು ನೀಡಲಾಗಿದ್ದು, ಅದು ಸ್ಫೋಟಗೊಂಡ ಪರಿಣಾಮ ಹಸು ಗಾಯಗೊಂಡ ಘಟನೆ ನಡೆದಿದೆ.
ಬಿಲಾಸ್ಪುರ ಜಿಲ್ಲೆಯ ಜಾಂಡುಟಾ ಪ್ರದೇಶದಲ್ಲಿ ಗರ್ಭಿಣಿ ಹಸುವಿನ ಬಾಯಿ ಸ್ಫೋಟಿಸಲಾಗಿದೆ. ಹೊಲವೊಂದರಲ್ಲಿ ಮೇಯುತ್ತಿದ್ದಾಗ, ಅದೇನ್ ತಿಂತೋ ಏನೋ ಗರ್ಭಿಣಿ ಹಸುವಿನ ದವಡೆ ಸ್ಫೋಟಗೊಂಡಿದೆ. ಈ ಹಸು ಗುರುದಯಾಳ್ ಸಿಂಗ್ ಎಂಬುವರಿಗೆ ಸೇರಿದ್ದಾಗಿದೆ. ತಮ್ಮ ನೆರೆಹೊರೆಯವರೇ ಈ ದುಷ್ಕೃತ್ಯ ಎಸಗಿದ್ದಾರೆ ಎಂದು ಗುರುದಯಾಳ್ ಆರೋಪಿಸಿದ್ದಾರೆ.

ಆರೋಪಿಯ ಬಂಧನ
ಹಸುವಿನ ಮಾಲಕ ಗುರುದಯಾಳ್ ಸಿಂಗ್ ವಿಡಿಯೋವೊಂದನ್ನು ಮಾಡಿ ರಕ್ತ ಒಸರುತ್ತಿದ್ದ ಹಸುವನ್ನು ತೋರಿಸಿದ್ದರು. ಈ ಕೃತ್ಯ ಎಸಗಿದ್ದು ತನ್ನ ನೆರೆಮನೆಯ ನಂದಲಾಲ್ ಎಂಬಾತ ಎಂದು ಆರೋಪಿಸಿದ್ದರು. ಘಟನೆಗೆ ಸಂಬಂಧಿಸಿ ನಂದ ಲಾಲ್ ನನ್ನು ಬಂಧಿಸಲಾಗಿದೆ. ಹಸು ಗುಣಮುಖವಾಗುತ್ತಿದ್ದು, ಕರುವಿಗೆ ಜನ್ಮ ನೀಡಿದೆ ಎಂದು ವರದಿಯಾಗಿದೆ.


