ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಹಂತಕರ ಪತ್ತೆ ಆಗಿಲ್ಲ. ಕೃತ್ಯಕ್ಕೆ ಸಹಕರಿಸಿದ ಆರೋಪದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಇನ್ನೂ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ. ತನಿಖೆಯೂ ಮುಂದುವರೆದಿದ್ದು, ಪೊಲೀಸರಿಗೆ ಮಹತ್ವದ ಸುಳಿವೊಂದು ಪತ್ತೆಯಾಗಿದೆ. ಕೃತ್ಯದಲ್ಲಿ ನೇರವಾಗಿ ಭಾಗಿಯಾದ ಎಂದು ಹೇಳಲಾಗುತ್ತಿರುವ ಹಂತಕರೊಂದಿಗೆ ನೇರ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
ಹೌದು ಉಪ್ಪಳ ಸೋಂಕಾಲು ನಿವಾಸಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ ಎನ್ನಲಾಗಿದೆ. ವಶಕ್ಕೆ ಪಡೆದ ವ್ಯಕ್ತಿ 20 ವರ್ಷಗಳ ಹಿಂದೆ ಬೆಳ್ಳಾರೆಯ ತಿಂಗಳಾಡಿ ಎಂಬಲ್ಲಿಂದ ಬಂದು ಸೋಂಕಾಲ್ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಆದರೆ ಕಳೆದ ಮೂರು ವರ್ಷಗಳ ಹಿಂದೆ ಮಾಲೀಕ ಹಾಗೂ ಕಾರ್ಮಿಕನ ನಡುವೆ ಏನೋ ತಕರಾರು ನಡೆದು ವ್ಯಕ್ತಿಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಪ್ರಸ್ತುತ ವಶಕ್ಕೆ ಪಡೆದ ವ್ಯಕ್ತಿಯ ಮನೆಯಲ್ಲಿ ಹತ್ಯೆಯ ಪ್ರಮುಖ ಆರೋಪಿ ಎರಡು ದಿನಗಳ ಕಾಲ ವಾಸವಿದ್ದ ಎನ್ನಲಾಗುತ್ತಿದೆ.
ಈ ಆರೋಪಿಗೆ ಆಶ್ರಯ ನೀಡಿದ್ದ ವ್ಯಕ್ತಿ ತಾನು ಸಿಲುಕಿ ಬೀಳದ ಹಾಗೆ ತಲೆ ಓಡಿಸಿದ್ದಾನೆ. ಎಂದಿನಂತೆ ಬ್ರಾಹ್ಮಣ ಸಮುದಾಯದವರ ತೋಟದ ಕೆಲಸಕ್ಕೆ ಹೋದಾಗ ಯಜಮಾನನ ಫೋನ್ ತೆಗೆದುಕೊಂಡು ಹಂತಕನೊಂದಿಗೆ ಮಾತನಾಡಿದ್ದಾನೆ. ನಂತರ ಫೋನ್ ನಂಬರ್ ಸಿಗದ ರೀತಿಯಲ್ಲಿ ಕಾಲ್ ಚಾಟ್ ಡಿಲೀಟ್ ಮಾಡಿದ್ದಾನೆ. ಆದರೆ ಪೊಲೀಸರಿಗೆ ಈ ಸುಳಿವು ಸಿಕ್ಕಿದ್ದು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಎಂಟ್ರಿ ಕೊಟ್ಟ ಪೊಲೀಸರು ಅಲ್ಲಿಂದಲೇ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ.