ಉಡುಪಿ: ಇಲ್ಲಿನ ಪಾರಂಪರಿಕ ಯಕ್ಷಗಾನ ಉಡುಗೆ ನೇಯುತ್ತಿದ್ದ 72 ವರ್ಷ ವಯಸ್ಸಿನ ಲಕ್ಷ್ಮಣ ಶೆಟ್ಟಿಗಾರ್ ಎಂಬ ನೇಕಾರರ ಕುಟುಂಬ ಕಳೆದ ಕೆಲವು ದಿನಗಳಿಂದ ಸುರಿದ ಭಾರಿ ಮಳೆಗೆ ಸಂಕಷ್ಟದಲ್ಲಿದೆ. ಎಂದೂ ಕಾಣದ ಪ್ರವಾಹ ಅವರ ಸೂರನ್ನು ಕಿತ್ತುಕೊಂಡಿದೆ. ಇಂಥಾ ಸಂದರ್ಭ ಅವರಿಗೆ ತಕ್ಷಣಕ್ಕೆ ಬೇಕಾಗುವ ಆರ್ಥಿಕ ಸಹಾಯ ಒದಗಿಸುವ ಅಭಯವನ್ನು ನಟಿ ಪ್ರಣೀತಾ ಸುಭಾಷ್ ನೀಡಿದ್ದಾರೆ.
‘ಆ ಕುಟುಂಬದವರ ಖಾತೆಗೆ ನೇರ ಹಣ ಸಂದಾಯ ಮಾಡುತ್ತೇನೆ. ಈ ಕುಟುಂಬವೂ ಸೇರಿದಂತೆ ನೆರೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಹೆಚ್ಚಿನ ನೆರವು ನೀಡಿ ಅಂತ ಎಲ್ಲರಲ್ಲೂ ಮನವಿ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.
ಯಕ್ಷಗಾನ ಕಲೆ ವಿಶ್ವಪ್ರಸಿದ್ಧಿಯಾದರೂ ಅದಕ್ಕೆ ಬೇಕಾದ ಪಾರಂಪರಿಕ ಕೈ ಮಗ್ಗದ ಉಡುಗೆ ತಯಾರಿಸುವವರು ಬೆರಳೆಣಿಕೆಯ ಮಂದಿ. ಲಕ್ಷ್ಮಣ ಶೆಟ್ಟಿಗಾರ್ ಮತ್ತು ಅವರ ಪತ್ನಿ ಬಲು ಅಪರೂಪದ ಯಕ್ಷಗಾನದ ಕೈಮಗ್ಗ ಸೀರೆಗಳನ್ನು ನೇಯುತ್ತಾ ಅದರಲ್ಲೇ ಬದುಕು ಕಟ್ಟಿಕೊಂಡವರು . ಈಗ ಉಡುಪಿಯ ಭಾರೀ ಪ್ರವಾಹಕ್ಕೆ ಅವರ ಮನೆ ಮುಳುಗಿದೆ. ನೇಯ್ಗೆ ಯಂತ್ರಗಳು ಕೈಕೊಟ್ಟಿವೆ. ಅವರ ನೆರವಿಗೆ ನಾನಿದ್ದೇನೆ ಅನ್ನುತ್ತಿರುವ ಪ್ರಣೀತಾ ಸುಭಾಷ್ ಅವರ ನಡೆ ಎಲ್ಲಾ ಸೆಲೆಬ್ರಿಟಿಗಳಿಗೆ ಮಾದರಿ.