ಬಾಗಲಕೋಟೆ : ಮುಸ್ಲಿಂ ಯುವಕ ಒಬ್ಬ ಹಿಂದೂ ಯುವತಿಯನ್ನು ಮದುವೆ ಮಾಡಿಕೊಂಡರೆ ಹಿಂದು ಯುವಕರು ಅವರ ಸಮುದಾಯದ ಹತ್ತು ಯುವತಿಯರನ್ನು ಬಲೆಗೆ ಬೀಳಿಸಿ ಮದುವೆಯಾಗಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಭಾನುವಾರ ಆಯೋಜಿಸಿದ್ದ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದು ಯುವತಿಯರನ್ನು ಮೋಸದ ಬಲೆಗೆ ಬೀಳಿಸಿ ಲವ್ ಜಿಹಾದ್ ನಡೆಸಲಾಗುತ್ತಿದೆ. ಅವರು ನಮ್ಮ ಒಬ್ಬ ಯುವತಿಯನ್ನು ಮದುವೆ ಮಾಡಿಕೊಂಡರೆ ಹಿಂದು ಯುವಕರು ಅವರ ಸಮುದಾಯದ ಹತ್ತು ಯುವತಿಯರನ್ನು ಬಲೆಗೆ ಬೀಳಿಸಿ ಮದುವೆ ಆಗಬೇಕು. ಯುವಕರನ್ನು ರಕ್ಷಿಸುವ ಜವಾಬ್ದಾರಿ ಶ್ರೀರಾಮ ಸೇನೆ ಮೇಲೆ ಇರಲಿದೆ ಎಂದಿದ್ದಾರೆ.ಅಲ್ಲದೇ ಮನೆಯಲ್ಲಿ ಪುಸ್ತಕ, ಕಂಪಾಸ್ ಬಿಟ್ಟು ಹರಿತವಾದ ತಲ್ವಾರ್ ಇಟ್ಕೊಳ್ಳಿ ಎಂದು ಶ್ರೀರಾಮಸೇನೆ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.
ಇವತ್ತು ಹಿಂದೂಗಳ ಮನೆಗಳಲ್ಲಿ ಮಂಡ ಚಾಕೂನು ಇಲ್ಲ, ಬಡಿಗಿ ಕೂಡ ಇಲ್ಲ, ಎಲ್ಲರ ಮನೆಯಲ್ಲಿ ಒಂದು ಹರಿತವಾದ ತಲವಾರ್ ಇಟ್ಟುಕೊಳ್ಳಬೇಕು. ಶಸ್ತ್ರ ಪೂಜೆ, ಆಯುಧ ಪೂಜೆ ನಮ್ಮಲ್ಲಿ ಇದೆ. ಹೀಗಾಗಿ ನಮ್ಮ ಮನೆಗಳಲ್ಲಿ ಚಾಕು, ತಲವಾರ್, ಕೊಡಲಿ ಇಟ್ಟುಕೊಳ್ಳಬೇಕು ಇದು ನಮ್ಮಲ್ಲಿ ಸಂಪ್ರದಾಯವಾಗಿದೆ ಎಂದು ಹೇಳಿದ್ದಾರೆ.