ಉಡುಪಿ: ಹಿಜಾಬ್ ಹೋರಾಟ ಬೆಂಬಲಿಸಿ ಅಲ್ ಖೈದ ಉಗ್ರ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಈ ವಿಡಿಯೋ ಬಿಜೆಪಿ ಸಂಘಪರಿವಾರದ ಸೃಷ್ಟಿ ಎಂದು ಹೇಳಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹಿಂಜಾವೇ ಮುಖಂಡ ಪ್ರಕಾಶ್ ಕುಕ್ಕೆಹಳ್ಳಿ ವಾಗ್ದಾಳಿ ನಡೆಸಿದ್ದಾರೆ.
ಹಿಜಾಬನ್ನು ಸಿದ್ದರಾಮಯ್ಯ ಬಲವಾಗಿ ಬೆಂಬಲಿಸುತ್ತಾ ಬಂದಿದ್ದಾರೆ ಎಂದಿರುವ ಹಿಂದೂ ಜಾಗರಣ ವೇದಿಕೆ ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ , ಡಿಕೆಶಿಯವರು ಈ ಬೆಳವಣಿಗೆಯನ್ನು ಎಲ್ಲೂ ಸಮರ್ಥಿಸಿಕೊಂಡು ಹೋಗಿಲ್ಲ. ಡಿ.ಕೆ ಶಿವಕುಮಾರ್ ಗೆ ವಾಸ್ತವದ ಅರಿವಿದೆ. ಆದರೆ ಸಿದ್ದರಾಮಯ್ಯ ಹಿಂದೂ ಸಮಾಜ ಪರವಾಗಿ ಎಂದೂ ನಿಂತಿಲ್ಲ. ಜೀವನಪೂರ್ತಿ ಮುಸಲ್ಮಾನ ತುಷ್ಟೀಕರಣ ಅನುಸರಿಸಿದವರು.
ಸಿದ್ದರಾಮಯ್ಯರ ಬಗ್ಗೆ ಹಿಂದೂ ಸಮಾಜ ಯಾವುದೇ ನಿರೀಕ್ಷೆಯನ್ನು ಇಟ್ಟುಕೊಂಡಿಲ್ಲ ಎಂದು ಹೇಳಿದ್ದಾರೆ. ಉಗ್ರನ ವೀಡಿಯೋ ಸಂಘ ಪರಿವಾರ ಸೃಷ್ಟಿ ಅಂತಾರೆ. ಮುಂದೆ ಅಲ್ ಖೈದ ಮುಖ್ಯಸ್ಥ ಆರೆಸ್ಸೆಸ್ ಸ್ವಯಂಸೇವಕ ಎಂದು ಹೇಳಬಹುದು. ಸಿದ್ದರಾಮಯ್ಯ ಮನಸ್ಥಿತಿ ಮತ್ತು ಮಾನಸಿಕತೆಗೆ ತಕ್ಕಂತೆ ಮಾತನಾಡುತ್ತಾರೆ. ಈಶ್ವರಪ್ಪರ ನಾಲಿಗೆ ಮತ್ತು ಮೆದುಳಿಗೆ ಸಂಬಂಧ ಇಲ್ಲ ಅಂತೀರಿ.. ನಿಮ್ಮ ಮೆದುಳು ಮತ್ತು ನಾಲಿಗೆಗೆ ಸಂಬಂಧ ಇದೆಯೇ? ಎಂದು ಪ್ರಶ್ನಿಸಿದ್ದಾರೆ.