ಬೆಳ್ತಂಗಡಿ : ಕಾಟಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸ್ವಾಗತ ದ್ವಾರ ನಿರ್ಮಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಕ್ಕೊಳಗಾಗಿ ಓರ್ವ ಯುವಕ ದಾರುಣವಾಗಿ ಮೃತಪಟ್ಟ ಘಟನೆ ನೆರಿಯ ಗ್ರಾಮದ ಬಯಲು ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ನೆರಿಯ ಗ್ರಾಮದ ಅಪ್ಪಿಲ ನಿವಾಸಿ ಸೋಮಪ್ಪ ಗೌಡ ಎಂಬವರ ಪುತ್ರ ಉಮೇಶ( 38) ಮೃತ ದುರ್ದೈವಿ.
ಕಾಟಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ನೆರಿಯ ಬಯಲು ಎಂಬಲ್ಲಿ ಶುಕ್ರವಾರ ರಾತ್ರಿ ಯುವಕರ ತಂಡ ಸ್ವಾಗತ ದ್ವಾರ ನಿರ್ಮಿಸುತ್ತಿತ್ತು. ಈ ಸಂದರ್ಭ ದ್ವಾರದ ಮೇಲ್ಗಡೆ ಎಚ್ಪಿಸಿಎಲ್ ನೆರಿಯ ಪಂಪ್ ಹೌಸ್ಗೆ ಹಾದು ಹೋದ ನಾಗಾರ್ಜುನ ಎಚ್ಟಿ ವಿದ್ಯುತ್ ಲೈನ್ಗೆ ಆಕಸ್ಮಿಕವಾಗಿ ಬಿದಿರು ತಾಗಿದೆ ಎನ್ನಲಾಗಿದೆ. ಈ ವೇಳೆ ಬಿದಿರಿನಲ್ಲಿ ವಿದ್ಯುತ್ ಪ್ರವಹಿಸಿ ಆಘಾತಕ್ಕೊಳಗಾದ ಉಮೇಶ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.