ಬೆಂಗಳೂರು: ಸಮಾರಂಭಕ್ಕೆ ಶಾಮಿಯಾನ ಹಾಕುವಾಗ ಕರೆಂಟ್ ಹೊಡೆದು ನಾಲ್ವರು ಯುವಕರು ಸಾವನಪ್ಪಿರುವ ಘಟನೆ ಬೆಂಗಳೂರಿನ ಅತ್ತಿಬೆಲೆ ಠಾಣೆ ವ್ಯಾಪ್ತಿಯ ಇಂಡ್ಲ ಬೆಲೆ ಗ್ರಾಮದ ಬಳಿ ನಡೆದಿದೆ.
ಕಲಬುರ್ಗಿ ಮೂಲದ ಆಕಾಶ್ (30), ಹನೂರು ಮೂಲದ ಮಹಾದೇವ್ (35), ಟಿ.ನರಸಿಪುರ ಮೂಲದ ವಿಷಕಂಠ (35) ಮತ್ತು ಜಾರ್ಖಂಡ್ ಮೂಲದ ವಿಜಯ್ (30) ಮೃತ ದುರ್ದೈವಿಗಳು.
ಇಂಡ್ಲಬೆಲೆ ಸಮೀಪ ಜಿ.ಆರ್. ಸಂಸ್ಕೃತಿ ಎಂಬ ಅಪಾರ್ಟ್ಮೆಂಟ್ ನಿರ್ಮಾಣಕ್ಕಾಗಿ ಗುರುವಾರ ಭೂಮಿಪೂಜೆ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಉಷಾಕಿರಣ್ ಎಂಬ ಟೆಂಟ್ಹೌಸ್ಗೆ ಶಾಮಿಯಾನ, ಲೈಟಿಂಗ್ ಅಳವಡಿಸುವ ಹೊಣೆ ವಹಿಸಲಾಗಿತ್ತು. ಸಂಸ್ಥೆ ಶಾಮಿಯಾಣ ಅಳವಡಿಸಲು ನಾಲ್ವರು ಕಾರ್ಮಿಕರನ್ನು ಕಳುಹಿಸಿಕೊಟ್ಟಿತ್ತು.
ಶಾಮಿಯಾನ ಅಳವಡಿಸುವಾಗ ಉದ್ದದ ಕಬ್ಬಿಣದ ಕಂಬ ವಿದ್ಯುತ್ ವೈರ್ಗೆ ತಗುಲಿದೆ. ಕಂಬವನ್ನು ಹಿಡಿದುಕೊಂಡಿದ್ದರಿಂದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳೀಯರು ನಾಲ್ವರನ್ನು ಬಚಾವು ಮಾಡಲು ಯತ್ನಿಸಿದರಾದರೂ ಪ್ರಯೋಜನವಾಗಿಲ್ಲ. ಕ್ಷಣ ಮಾತ್ರದಲ್ಲೇ ನಾಲ್ವರು ಮೃತಪಟ್ಟಿದ್ದಾರೆ.