ಮಂಗಳೂರು: ವಾಮಂಜೂರಿನಲ್ಲಿ ಶಾರದೋತ್ಸವದ ಬ್ಯಾನರ್ ಹರಿದು ಕೋಮುಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದ ಯುವಕರ ಬಂಧನವಾಗಿದೆ.
ಐದಾರು ಬ್ಯಾನರ್ ಹರಿದು ಸಂಘರ್ಷ ಸೃಷ್ಟಿಸಲು ಪ್ಲ್ಯಾನ್ ಮಾಡಿ ಅನ್ಯಧರ್ಮಿಯರ ಮೇಲೆ ಅನುಮಾನ ಬರುವಂತೆ ಕೃತ್ಯ ಎಸಗಲಾಗಿತ್ತು. ಇದರ ಬೆನ್ನಲ್ಲೇ ಘಟನೆ ಸಂಬಂಧಿಸಿದಂತೆ ಅಚ್ಚರಿಯ ವಿಚಾರವೊಂದು ಬೆಳಕಿಗೆ ಬಂದಿದೆ. ದೈವರ ಮೊರೆ ಹೋದ ಕೂಡಲೇ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಅನ್ನೋದು ಬಹಿರಂಗವಾಗಿದೆ.
ಕಿಡಿಗೇಡಿಗಳ ಕೃತ್ಯಕ್ಕೆ ಬೇಸತ್ತ ಭಕ್ತರೊಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿಕೊಡುವಂತೆ ಕಾರ್ಣಿಕ ದೈವ ಗುಳಿಗ ಮೊರೆ ಹೋಗಿದ್ದಾರೆ. ಅಚ್ಚರಿ ಅಂದ್ರೆ ದೈವಕ್ಕೆ ಪ್ರಾರ್ಥನೆ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಕಿಡಿಗೇಡಿಗಳ ಬಂಧನವಾಗಿದೆ ಎನ್ನಲಾಗಿದೆ.
ಸುಮಿತ್ ಹೆಗ್ಡೆ, ಯತೀಶ್ ಪೂಜಾರಿ, ಪ್ರವೀಣ್ ಪೂಜಾರಿ ಬಂಧಿತ ಆರೋಪಿಗಳು. ಈ ಮೂವರು ಆರೋಪಿಗಳು ಮಂಗಳೂರಿನ ಹೊರ ವಲಯದ ವಾಮಂಜೂರು ಬಳಿ ಶಾರದೋತ್ಸವಕ್ಕೆ ಅಳವಡಿಸಿದ ಬ್ಯಾನರ್ ಹರಿದು ಹಾಕಿದ್ದರು. ಕರಾವಳಿಯಲ್ಲಿ ಮತ್ತೆ ಕೋಮು ಸಂಘರ್ಘಕ್ಕೆ ಸಂಚು ರೂಪಿಸಲಾಗಿದ್ದು, ಶಾರದೋತ್ಸವದ ನಿಮಿತ್ತ ಹಾಕಲಾಗಿದ್ದ, ಬ್ಯಾನರ್ ಹರಿದು ಕೋಮುಗಲಭೆ ಸೃಷ್ಟಿಸಲು ಪ್ಲ್ಯಾನ್ ಮಾಡಿದ್ದಾರೆಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.