ಮಂಗಳೂರು; ರೌಡಿ ಶೀಟರ್ ತಲ್ಲತ್ ನನ್ನು ಬಂಧಿಸಲಾಗಿದೆ. ತಲ್ಲತ್ ಬಂಧನದ ಬಗ್ಗೆ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಪ್ರತಿಕ್ರಿಯಿಸಿದ್ದು ಈತನ ವಿರುದ್ಧ ಮಂಗಳೂರಿನ ವಿವಿಧ ಠಾಣೆ,ಮುಂಬೈ ಸೇರಿ ಹಲವೆಡೆ ಕ್ರಿಮಿನಲ್ ಚಟುವಟಿಕೆಗೆ ಸಂಬಂಧಿಸಿ 30 ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.
ಈತನ ಮೇಲೆ ಕಂಕನಾಡಿ,ಉಳ್ಳಾಲ,ಕೊಣಾಜೆ,ಬರ್ಕೆ ಠಾಣೆಯಲ್ಲಿ ಕೇಸ್ ದಾಖಲಾಗಿದೆ.ಈತ ಉಳ್ಳಾಲ,ಅಡ್ಯಾರ್ , ಕಣ್ಣೂರು,ಬಜಾಲ್, ಫರಂಗಿಪೇಟೆ ಸೇರಿ ಹಲವೆಡೆ ಪಡೆ ಕಟ್ಟಿಕೊಂಡು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ. ಈತನ ಜೊತೆಗಿರುವವರ ಮೇಲೆ ಕೂಡ ಹಲವಾರು ಕ್ರಿಮಿನಲ್ ಕೇಸ್ ಗಳಿವೆ.ಈತ ಮುಖ್ಯವಾಗಿ ಬೆಂಗಳೂರಿನಲ್ಲಿ ಇದ್ದುಕೊಂಡು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ಎಂದು ಹೇಳಿದ್ದಾರೆ.ಈತನ ಬಗ್ಗೆ ಹೆಚ್ಚಿನ ಸಾಕ್ಷಿ ಕಲೆ ಹಾಕಲಾಗುತ್ತಿದೆ. ಎಲ್ಲಾ ಚಟುವಟಿಕೆ ಬಗ್ಗೆ ವಿಚಾರಣೆ ಬಳಿಕ ಮಾಹಿತಿ ತಿಳಿದು ಬರಲಿದೆ ಎಂದು ಹೇಳಿದ್ದಾರೆ.
ಇದಲ್ಲದೇ ಈತ ರಕ್ತದಾನ,ಕೋವಿಡ್ ಸಮಯದಲ್ಲಿ ಪುಡ್ ಸಪ್ಲೈ,ಮೆಡಿಕಲ್ ಸಪೋರ್ಟ್ ಮಾಡುತ್ತಿದ್ದ. ಇದಕ್ಕೆ ಅವರದೇ ಸಮುದಾಯದ ಜನರಿಂದ ಬೆದರಿಸಿ ಹಣ ಪಡೆದುಕೊಂಡಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ತನಿಖೆ ನಡೆಸುತ್ತೇವೆ. ಇದಲ್ಲದೆ ಆತನ ಮೇಲೆ ಕೊಲೆ, ಕೊಲೆಯತ್ನ,ಶಸ್ತ್ರಾಸ್ತ ಕಾಯ್ದೆ,ಆಸ್ತಿಪಾಸ್ತಿ ನಾಶ ಕುರಿತು ಕೂಡ ಪ್ರಕರಣ ದಾಖಲಾಗಿದೆ ಎಂದು ಕಮಿಷನರ್ ಹೇಳಿದ್ದು, ಎಲ್ಲದರ ಕುರಿತು ತನಿಖೆ ನಡೆಸುವುದಾಗಿ ಹೇಳಿದ್ದಾರೆ.