ಬೆಂಗಳೂರುಃ ಕಳ್ಳ ಎಷ್ಟೇ ಚಾಣಾಕ್ಷನಾಗಿದ್ದರೂ ಪೊಲೀಸರಿಂದ ಎಸ್ಕೇಪ್ ಆಗೋದಕ್ಕೆ ಸಾಧ್ಯಾನೇ ಇಲ್ಲ. ಹೀಗೆ ಪೊಲೀಸರಿಗೆ ಚಳ್ಳೇ ಹಣ್ಣು ತಿನ್ನಿಸೋದಕ್ಕೆ ಹೋದ ಕಳ್ಳನೊಬ್ಬನನ್ನು ವಿಮಾನದಲ್ಲಿ ಹೋಗಿ ಹಿಡಿರುವ ಘಟನೆ ನಡೆದಿದೆ. ಅದು ಕೂಡ ನಮ್ಮ ಕರ್ನಾಟಕ ಪೊಲೀಸರು ಅನ್ನೋದು ಹೆಮ್ಮೆಯ ವಿಚಾರ.
ಯೆಸ್.. ಮೂಲತಃ ಪಶ್ಚಿಮ ಬಂಗಾಳದ ಬುರ್ದ್ವಾನ್ನ ಆರೋಪಿ ಬೆಂಗಳೂರಿನ ಬಿಲ್ಡರ್ ಮನೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಈ ಕಳ್ಳನಿಗೆ ಅವರು ನೆಲಮಾಳಿಗೆಯಲ್ಲಿಯೇ ಮನೆ ಕೊಟ್ಟಿದ್ದರು. ಮನೆ ಮಾಲೀಕರಿಗೆ ಕರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಪರೀಕ್ಷೆಗೆಂದು ಹೋಗಿದ್ದರು.
ಮಾಲೀಕರು ಇಲ್ಲದ್ದನ್ನು ಕಂಡ ಆರೋಪಿ, ಹೊಂಚು ಹಾಕಿ ಮನೆಯಲ್ಲಿದ್ದ 1.3 ಕೋಟಿ ರೂ. ಮೌಲ್ಯದ ಅಮೂಲ್ಯ ಆಭರಣಗಳನ್ನು ಹೊಂದಿರುವ ಇಲೆಕ್ಟ್ರಿಕ್ ಲಾಕರ್ ಅನ್ನೇ ಕದ್ದು ಒಯ್ದಿದ್ದಾನೆ. ಇನ್ನು ತಾನು ಜೀವನಪೂರ್ತಿ ಆರಾಮದಿಂದ ಕಳೆಯಬಹುದು. ತನ್ನನ್ನು ಪತ್ತೆ ಹಚ್ಚಲು ಸಾಧ್ಯವೇ ಇಲ್ಲ ಎಂದುಕೊಂಡ ಆರೋಪಿ ಪಶ್ಚಿಮ ಬಂಗಾಳದ ಹೌರಾಕ್ಕೆ ರೈಲು ಹತ್ತಿದ್ದಾನೆ.
ಇತ್ತ ಮನೆಗೆ ಬರುತ್ತಿದ್ದಂತೆಯೇ ಕಳ್ಳತನವಾಗಿರುವುದು ತಿಳಿದ ಮಾಲೀಕರು ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. ಆ ಕ್ಷಣದಲ್ಲಿಯೇ ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ್ದಾರೆ. ಕಳ್ಳ ಯಶವಂತಪುರದ ರೈಲ್ವೆ ನಿಲ್ದಾಣದಿಂದ ರೈಲು ಹತ್ತುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅದಾಗಲೇ ರೈಲು ಹೋಗಿ ತುಂಬಾ ಹೊತ್ತು ಆಗಿದ್ದರಿಂದ ತಡ ಮಾಡದ ಪೊಲೀಸರು ಕೋಲ್ಕತಾ ವಿಮಾನ ಹತ್ತಿದರು. ರೈಲು ಇನ್ನೂ ಹೌರಾ ನಿಲ್ದಾಣ ತಲುಪಿರಲಿಲ್ಲ. ಆದ್ದರಿಂದ ಅಲ್ಲಿಯೇ ಇಳಿದ ಪೊಲೀಸರು ರೈಲು ಬರುವುದಕ್ಕಿಂತ ಮುಂಚಿತವಾಗಿ ನಿಲ್ದಾಣ ತಲುಪಿದ್ದಾರೆ. ನಿಶ್ಚಿಂತೆಯಿಂದ ಕನಸು ಕಾಣುತ್ತಿದ್ದ ಕಳ್ಳನನ್ನು ಅಲ್ಲಿಯೇ ಬಂಧಿಸಿದ ಪೊಲೀಸರು ಆತನ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.