ಮಡಿಕೇರಿ: ಮುಂದಿನ ದಿನಗಳಲ್ಲಿ ಭಾರೀ ಭೂಕಂಪನದಿಂದ ಕೊಡಗು ಜಿಲ್ಲೆ ನೆಲಸಮವಾಗಲಿದೆ ಎಂದು ಆತಂಕದ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಗೋಣಿಕೊಪ್ಪಲು ಶ್ರೀಮಂಗಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕೊಡಗು ಬೆಳೆಗಾರರ ಒಕ್ಕೂಟದ ವತಿಯಿಂದ ದೂರು ನೀಡಲಾಗಿದ್ದು ಸಮಾಜದಲ್ಲಿ ಆತಂಕ ಸೃಷ್ಟಿಸುವ ಹೇಳಿಕೆ ನೀಡಿದ ಬ್ರಹ್ಮಾಂಡ ಗುರೂಜಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಗುರೂಜಿ ಎಂದು ಹೇಳಿಕೊಂಡಿರುವ ವ್ಯಕ್ತಿ ಯಾವ ಆಧಾರದಲ್ಲಿ ಭವಿಷ್ಯ ನುಡಿದಿದ್ದಾರೆ. ಭಾರಿ ಭೂಕಂಪದಿಂದ ಕೊಡಗು ನೆಲಸಮವಾಗಲಿದೆ ಎಂದು ಅವರು ಹೇಳಿದ್ದು, ಸರ್ಕಾರ ಗುರೂಜಿಯ ಭವಿಷ್ಯವನ್ನು ನಂಬುವುದಾದರೆ ಭೂಕಂಪದ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಬೇಕು. ವೈಜ್ಞಾನಿಕ ಆಧಾರದ ಮೇಲೆ ವಿಶ್ಲೇಷಣೆ ನಡೆಸಬೇಕು. ಸರ್ಕಾರ ಅಧಿಕೃತವಾಗಿ ನಂಬಿದರೆ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪ ಮತ್ತು ಪ್ರವಾಹದಿಂದಾಗಿ ಕೊಡಗು ಜಿಲ್ಲೆಯ ಜನ ನಲುಗಿ ಹೋಗಿದೆ. ಜನ ಮೊದಲೇ ಆತಂಕದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಆತಂಕ ಸೃಷ್ಟಿಸುವ ಹೇಳಿಕೆ ನೀಡಿದ ಬ್ರಹ್ಮಾಂಡ ಗುರೂಜಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಡಿಕೆ ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳು ದೂರು ನೀಡಿದ್ದಾರೆ.