ಮೂಡುಬಿದಿರೆ: ಗುಡ್ಡಗಾಡು ಪ್ರದೇಶದಲ್ಲಿ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದ ಖಚಿತ ಮಾಹಿತಿ ಪಡೆದ ಮೂಡುಬಿದಿರೆ ಪೊಲೀಸರು ದಾಳಿ ನಡೆಸಿ, ಐದು ದನಗಳನ್ನು ರಕ್ಷಿಸಿದ ಘಟನೆ ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಡೇಲು ಎಂಬಲ್ಲಿ ನಡೆದಿದೆ.
ದನಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಆರೋಪಿಗಳು ಪರಾರಿಯಾಗಿದ್ದಾರೆ. ಹಂಡೇಲು ನಿವಾಸಿ ಹಸನ್ಬಾವ ಎಂಬಾತ ಕುಟುಂಬಸ್ಥರ ಜೊತೆ ಕಸಾಯಿಖಾನೆ ನಡೆಸುತ್ತಿದ್ದ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಐದು ದನಗಳು, ದನದ ಚರ್ಮ, ಅವುಗಳ ವಧೆಗೆ ಬಳಸುತ್ತಿದ್ದ ಆಯುಧಗಳನ್ನು ವಶಕ್ಕೆ ಪಡೆದಿದ್ದಾರೆ.
ನಿರ್ಜನ ಹಾಗೂ ಅಕ್ರಮವಾಗಿ ಕಸಾಯಿಖಾನೆ ನಡೆಸಲು ಪೂರಕ ಪ್ರದೇಶವನ್ನು ಆರೋಪಿ ನಿರ್ಮಿಸಿದ್ದು, ಗುಡ್ಡದ ಬಳಿ ಇದ್ದ ತನ್ನ ಮನೆಯಿಂದಲೇ ನೀರು ಹಾಗೂ ವಿದ್ಯುತ್ ಸಂಪರ್ಕ ಮಾಡಿದ್ದ ಎನ್ನುವ ಅಂಶವು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಕಾರ್ಯಾಚರಣೆಯಲ್ಲಿ ನಿರಂಜನ್ ಕುಮಾರ್, ಉಪನಿರೀಕ್ಷಕರರಾದ ಸುದೀಪ್, ಸಿದ್ದಪ್ಪ, ದಿವಾಕರ್ ರೈ ಸಹಿತ ಸಿಬ್ಬಂದಿಗಳ ತಂಡ ಭಾಗವಹಿಸಿದ್ದರು.