ಕಲ್ಲಡ್ಕ: ಮಂಗಳೂರು- ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿಯಾದ ಕಲ್ಲಡ್ಕದಲ್ಲಿ ಲಾರಿಯೊಂದರ ಚಕ್ರ ಮಣ್ಣಿನಲ್ಲಿ ಹೂತುಹೋದ ಪರಿಣಾಮವಾಗಿ ಬೆಳಗ್ಗೆಯಿಂದ ಸಂಚಾರಕ್ಕೆ ತಡೆಉಂಟಾದ ಘಟನೆ ಇಂದು ನಡೆದಿದೆ.
ಬೆಳಗ್ಗೆ ಸುಮಾರು 8 ಗಂಟೆಯಿಂದ ಆರಂಭವಾದ ಸಂಚಾರ ಅಡಚಣೆಯು 10.30ರವರೆಗೂ ಮುಗಿದಿರಲಿಲ್ಲ. ಕಲ್ಲಡ್ಕ ಅಮ್ಟೂರು ಕ್ರಾಸ್ ಬಳಿಯ ಹೆದ್ದಾರಿಯಲ್ಲಿ ಬೃಹತ್ ಹೊಂಡವೊಂದು ನಿರ್ಮಾಣವಾದ ಹಿನ್ನೆಲೆಯಲ್ಲಿ ಈ ಟ್ರಾಫಿಕ್ ಜಾಮ್ ಉಂಟಾಗಿದ್ದು, ಇದರಿಂದ ವಾಹನ ಸವಾರರು ಹಾಗೂ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇನ್ನು ರಸ್ತೆ ಸುಗುಮವಾಗದ ಹಿನ್ನೆಲೆಯಲ್ಲಿ ವಾಹನ ಸವಾರರು ಶಂಭೂರು, ದಾಸಕೋಡಿ ಮೂಲಕ ಪುತ್ತೂರು, ಉಪ್ಪಿನಂಗಡಿಗೆ ಸಂಚರಿಸುವಂತಾಯಿತು.
ಕೆ.ಎನ್.ಆರ್.ಸಿ.ಕಂಪೆನಿಯು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದ್ದು, ಗುಂಡಿ ಮುಚ್ಚುವ ಕಾರ್ಯವನ್ನು ಮಾಡಿದೆ. ಆದರೆ ರಸ್ತೆ ಕಾಮಗಾರಿ ಆರಂಭವಾದ ಬಳಿಕ ನಿರಂತರವಾಗಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆಯಾದರೂ ಈ ರೀತಿಯಲ್ಲಿ ತಾಸುಗಟ್ಟಲೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ತಡೆಯಾಗುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಹಾಗೂ 5 ನಿಮಿಷಗಳ ಕಾಲ ಹೆದ್ದಾರಿ ಬಂದ್ ಆದರೆ ಕಾನೂನು ಕ್ರಮ ಕೈಗೊಳ್ಳುವ ಪೋಲೀಸರು ಗುತ್ತಿಗೆ ವಹಿಸಿಕೊಂಡ ಕಂಪೆನಿಯ ಅವ್ಯವಸ್ಥಿತ ಕಾಮಗಾರಿಯಿಂದ ಈ ತೊಂದರೆ ಆದರೂ ಅವರ ಬಗ್ಗೆ ಯಾಕೆ ಮೃದು ಧೋರಣೆ ಹೊಂದಿದೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.