ಮಂಗಳೂರು: ಸಾಮಾನ್ಯವಾಗಿ ದೀಪಾವಳಿ ಬಳಿಕ ಮೇಳಗಳು ತಿರುಗಾಟ ಹೊರಡುತ್ತವೆಯಾದರೂ ಸಿದ್ಧತೆಗಳನ್ನು 2-3 ತಿಂಗಳ ಮೊದಲೇ ಮಾಡಿಕೊಳ್ಳುತ್ತವೆ. ಸದ್ಯ ಕೊರೊನಾ ಕಡಿಮೆಯಾಗುತ್ತಿರುವ ಕಾರಣ ಅನುಮತಿ ದೊರೆಯುವ ನಿರೀಕ್ಷೆ ಮೇಳಗಳದ್ದು. ಎರಡೂ ಜಿಲ್ಲೆಗಳ ಮುಂದಿನ ವಿಪತ್ತು ನಿರ್ವಹಣಾ ಸಭೆಯಲ್ಲಿ ಈ ಬಗ್ಗೆ ಮಾರ್ಗಸೂಚಿಗಳ ಆಧಾರದಲ್ಲಿ ಅನುಮತಿ ದೊರೆಯುವ ಸಾಧ್ಯತೆಯಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಶ್ರೀ ಕ್ಷೇತ್ರ ಕಟೀಲು, ಧರ್ಮಸ್ಥಳ, ಸಾಲಿಗ್ರಾಮ, ಮಂದಾರ್ತಿ, ಪೆರ್ಡೂರು, ಪಾವಂಜೆ, ಬಪ್ಪನಾಡು, ಸಸಿಹಿತ್ಲು, ಹನುಮಗಿರಿ, ಸುಂಕದಕಟ್ಟೆ ಸೇರಿದಂತೆ ಹಲವು ಮೇಳಗಳು ನವೆಂಬರ್ ಮಧ್ಯ ಹಾಗೂ ಕೊನೆಯಲ್ಲಿ ತಿರುಗಾಟ ಆರಂಭದ ಚಿಂತನೆ ನಡೆಸುತ್ತಿದ್ದು, ಅಂತಿಮ ತೀರ್ಮಾನ ಇನ್ನಷ್ಟೇ ಆಗಬೇಕಿದೆ.
ಶ್ರೀ ಕ್ಷೇತ್ರ ಕಟೀಲಿನ ಶ್ರೀ ಹರಿನಾರಾಯಣದಾಸ ಅಸ್ರಣ್ಣ ಅವರ ಪ್ರಕಾರ “ಪ್ರತೀವರ್ಷ ಶ್ರೀ ಕಟೀಲು ಮೇಳದಿಂದ 1 ವರ್ಷದಲ್ಲಿ ಸಾಮಾನ್ಯ ವಾಗಿ 190 ದಿನ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದರೆ, ಕೊರೊನಾ ನಿರ್ಬಂಧದ ಹಿನ್ನೆಲೆಯಲ್ಲಿ 2019ರಲ್ಲಿ 130 ಹಾಗೂ 2020ರಲ್ಲಿ 160 ದಿನಗಳ ಪ್ರದರ್ಶನ ಮಾತ್ರ ಆಗಿದೆ. ಈ ವರ್ಷದ ಪ್ರದರ್ಶನವನ್ನು ನ. 29ಕ್ಕೆ ಆರಂಭಿಸಲು ತೀರ್ಮಾನಿಸಲಾಗಿದೆ’ ಎಂದರು.
ಸಂಕಷ್ಟದಲ್ಲಿ ಕಲಾವಿದರು:
ಪಾವಂಜೆ ಮೇಳದ ಸಂಚಾಲಕ ಪಟ್ಲ ಸತೀಶ್ ಶೆಟ್ಟಿ ಅವರ ಪ್ರಕಾರ, 2 ವರ್ಷಗಳಲ್ಲಿ ಪೂರ್ಣವಾಗಿ ತಿರುಗಾಟ ಇಲ್ಲದೆ ಯಕ್ಷಗಾನ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಚೌತಿ ಸೇರಿದಂತೆ ಶುಭ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ವಿಲ್ಲದೆ ಹವ್ಯಾಸಿ ಕಲಾವಿದರು ಕಷ್ಟದಲ್ಲಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಅನುಮತಿ ನೀಡಿ ಯಕ್ಷಗಾನ, ನಾಟಕಕ್ಕೆ ಅವಕಾಶ ಇಲ್ಲದಿರುವುದು ಯಾವ ನ್ಯಾಯ? ಕಲೆಯನ್ನೇ ನಂಬಿಕೊಂಡಿರುವ ಸಾವಿರಾರು ಕುಟುಂಬಗಳು ಬೇಸರದಲ್ಲಿವೆ ಎನ್ನುತ್ತಾರೆ.
ಕಲಾ ಚಟುವಟಿಕೆ-ಚರ್ಚಿಸಿ ಅನುಮತಿ:
ದ.ಕ.ದಲ್ಲಿ ಕೊರೊನಾ ಕಡಿಮೆಯಾಗುತ್ತಿರುವ ಕಾರಣ ವಿವಿಧ ವಲಯಗಳಿಗೆ ಅನುಮತಿ ನೀಡಲಾಗಿದೆ. ಯಕ್ಷಗಾನ, ನಾಟಕ ಸೇರಿದಂತೆ ವಿವಿಧ ಕಲಾಪ್ರಕಾರಗಳಿಗೆ ಅನುಮತಿಸುವಂತೆ ಆಗ್ರಹವಿದೆ. ಜನಪ್ರತಿನಿಧಿಗಳು, ಅಧಿಕಾರಿಗಳ ಉಪಸ್ಥಿತಿಯ ಮುಂದಿನ ಜಿಲ್ಲಾ ವಿಪತ್ತು ನಿರ್ವಹಣ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಅಂತ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಹೇಳಿದ್ದಾರೆ.