ಮಂಗಳೂರು: ಮಹಾನಗರ ಪಾಲಿಕೆಯಲ್ಲಿ ನಡೆದ ಮೇಯರ್ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನರಿಕರು ತಮ್ಮ ಹತ್ತಾರು ಸಮಸ್ಯೆಗಳನ್ನು ಹೇಳಿಕೊಂಡರು.
ರಸ್ತೆ ಬದಿಯಲ್ಲಿ ತಿನಿಸುಗಳ ಮಾರಾಟದಿಂದ ಪಾದಚಾರಿಗಳ ಓಡಾಟಕ್ಕೆ ಅಡ್ಡಿ, ಹೊಂಡ-ಗುಂಡಿಯ ರಸ್ತೆಗಳು, ರಸ್ತೆಯ ಮೇಲೆ ಹರಿಯುವ ಚರಂಡಿ ನೀರು, ರಸ್ತೆ ಬದಿಯಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ ಹೀಗೆ ಹಲವಾರು ಸಮಸ್ಯೆಗಳನ್ನು ತೆರೆದಿಟ್ಟರು.
ಕಂಕನಾಡಿಯಲ್ಲಿ ಸಂಜೆ 5 ಗಂಟೆಯ ನಂತರ ರಸ್ತೆ ಬದಿಯಲ್ಲಿ ಫಾಸ್ಟ್ ಫುಡ್, ಆಹಾರ ತಿನಿಸುಗಳ ವ್ಯಾಪಾರ ನಡೆಯುತ್ತದೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುವುದಲ್ಲದೆ, ಪಾದಚಾರಿಗಳಿಗೆ ಓಡಾಡಲೂ ಸಮಸ್ಯೆಯಾಗುತ್ತದೆ. ಆಹಾರದ ಗುಣಮಟ್ಟದ ಬಗ್ಗೆಯೂ ಪರಿಶೀಲನೆ ಆಗುತ್ತಿಲ್ಲ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ಜೋಸೆಫ್ ಹೇಳಿದರು. ಸುರತ್ಕಲ್ ಜುಮ್ಮಾ ಮಸೀದಿ ಬಳಿ ಬೀದಿ ದೀಪ ಹಾಳಾಗಿದೆ. ಪಾಲಿಕೆಯ ಅಧಿಕಾರಿಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ ಎಂದು ಆ ಭಾಗದ ವ್ಯಕ್ತಿಯೊಬ್ಬರು ಸಮಸ್ಯೆ ಹೇಳಿಕೊಂಡರು. ಚಿಲಿಂಬಿಯಲ್ಲಿ ಒಳರಸ್ತೆ ಸಂಪೂರ್ಣ ಹಾಳಾಗಿದೆ. ಈ ಭಾಗಕ್ಕೆ ಕುಡಿಯುವ ನೀರು ಸಹ ಸರಿಯಾಗಿ ಬರುತ್ತಿಲ್ಲ ಎಂದು ವೆಂಕಟೇಶ್ ಹೇಳಿದರು.
ಇನ್ನು ಒಳಚರಂಡಿ ಸಮಸ್ಯೆಯಿಂದ ಬಾವಿ ನೀರು ಕಲುಷಿತ, ಮಲ್ಲಿಕಾ ಬಡಾವಣೆಯಲ್ಲಿ ರಸ್ತೆಯ ಮೇಲೆ ಹರಿಯುವ ಚರಂಡಿ ನೀರು, ಜೆಪ್ಪು ಮಹಾಕಾಳಿಪಡ್ಡು ಸಮೀಪ ಮಸೀದಿ ಎದುರು ಹಾಳಾಗಿರುವ ರಸ್ತೆ, ನಂದಿಗುಡ್ಡದಲ್ಲಿ 20 ಮನೆಗಳಿಗೆ ಇಲ್ಲದ ಚರಂಡಿ ವ್ಯವಸ್ಥೆ, ಜೆಪ್ಪಿನಮೊಗರು ಎಂಡ್ ಪಾಯಿಂಟ್ನಲ್ಲಿ ಮನೆಗಳಿಗೆ ಬಾರದ ನೀರು ಹೀಗೆ ಅನೇಕ ಸಮಸ್ಯೆಗಳನ್ನು ಸಾರ್ವಜನಿಕರು ಹೇಳಿಕೊಂಡರು. ಒಟ್ಟು 26 ಕರೆಗಳು ಬಂದವು.
ಸಭೆಯಲ್ಲಿ ಉಪಮೇಯ ಸುನೀತಾ, ಸ್ಥಾಯಿ ಸಮಿತಿ ಅಧ್ಯಕ್ಷ ಲೋಹಿತ್ ಅಮೀನ್, ಸದಸ್ಯರಾದ ಲೋಕೇಶ್ ಬೊಳ್ಳಾಜೆ, ಸಂಗೀತ ನಾಯಕ್ ಇದ್ದರು.