ಅಮರಾವತಿ: ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕುರಿಚೇಡು ಪ್ರದೇಶದಲ್ಲಿ ಮದ್ಯದ ಅಂಗಡಿಗಳು ಬಂದ್ ಆಗಿರುವ ಕಾರಣ ಸ್ಯಾನಿಟೈಸರ್ ಕುಡಿದ 9 ಜನರು ಮೃತಪಟ್ಟ ಘಟನೆ ನಡೆದಿದೆ. ಕಳೆದ 10 ದಿನಗಳಿಂದ 20ಕ್ಕೂ ಅಧಿಕ ಮಂದಿ ಸ್ಯಾನಿಟೈಸರ್ ಕುಡಿದಿದ್ದು, ಇಂದಿನವರೆಗೆ 9 ಜನರು ಮೃತಪಟ್ಟಿದ್ದಾರೆ. ಬುಧವಾರ ಮೊದಲ ಸಾವು ದಾಖಲಾಗಿತ್ತು. ಗುರುವಾರ ಮೂವರು ಮೃತಪಟ್ಟಿದ್ದರು. ಶುಕ್ರವಾರ ಬೆಳಗ್ಗೆ 6 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರದೇಶದಲ್ಲಿ ಸಿಕ್ಕ ಸ್ಯಾನಿಟೈಸರ್ಗಳನ್ನು ಪರೀಕ್ಷೆಗಾಗಿ ವಶಕ್ಕೆ ಪಡೆದಿದ್ದಾರೆ. ಕುರಿಚೇಡು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊರೊನಾ ವೈರಸ ಸೋಂಕಿನ ಪ್ರಕರಣಗಳು ಹೆಚ್ಚಿವೆ. ಆದ್ದರಿಂದ, ಸರ್ಕಾರ 10 ದಿನಗಳಿಂದ ಲಾಕ್ ಡೌನ್ ಘೋಷಣೆ ಮಾಡಿದೆ. ಇದರಿಂದಾಗಿ ಮದ್ಯದಂಗಡಿಗಳು ಮುಚ್ಚಿವೆ.
ಮದ್ಯ ಸಿಗದ ಕಾರಣ ಜನರು ಸ್ಯಾನಿಟೈಸರ್ ಸೇವಿಸಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ. ಆಂಧ್ರಪ್ರದೇಶದಲ್ಲಿ ಇಂದಿನವರೆಗೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ 1,30,557ಕ್ಕೆ ಏರಿಕೆಯಾಗಿದೆ. 1,281 ಜನರು ಇದುವರೆಗೂ ರಾಜ್ಯದಲ್ಲಿ ಮೃತಪಟ್ಟಿದ್ದಾರೆ.