ಅಯೋಧ್ಯೆ: ಅಯೋಧ್ಯೆ ಯ ರಾಮಜನ್ಮಭೂಮಿಯಲ್ಲಿ ಇಂದು ಜೇಷ್ಠ ಶುದ್ಧ ಬಿದಿಗೆಯ ಪರ್ವ ದಿನದಂದು ಶ್ರೀ ರಾಮನ ಗರ್ಭಗುಡಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಡಿಗಲ್ಲು ಹಾಕುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು. ಧಾರ್ಮಿಕ ಸಮಾರಂಭದಲ್ಲಿ ಪೇಜಾವರ ಶ್ರೀಗಳಾದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಭಾಗಿಯಾದರು. ಇದೇ ಸಂದರ್ಭ ಮಂದಿರ ನಿರ್ಮಾಣದ ಆಂದೋಲನ ಮತ್ತು ನ್ಯಾಯಾಲಯದ ತೀರ್ಪು ಮತ್ತು ಆ ಬಳಿಕ ಈ ಹಂತದವರೆಗಿನ ಎಲ್ಲ ಬೆಳವಣಿಗೆಗಳ ಸಚಿತ್ರ ವರದಿಯನ್ನೊಳಗೊಂಡ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು .
ಈ ಸಂಚಿಕೆಯಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ನಿರ್ವಹಿಸಿದ ಪಾತ್ರವನ್ನೂ ವಿಶೇಷವಾಗಿ ಉಲ್ಲೇಖಿಸಲಾಗಿದೆ. ಶಿಲಾನ್ಯಾಸ ಸಮಾರಂಭದಲ್ಲಿ ಸಂದರ್ಭದಲ್ಲಿ ಪೇಜಾವರ ಶ್ರೀಗಳು ವಿಷ್ಣು ಸಹಸ್ರನಾಮ ಪಾರಾಯಣಗೈದರು ಮತ್ತು ಉಡುಪಿ ಕೃಷ್ಣನ ಪ್ರಸಾದ , ಸಾಲಿಗ್ರಾಮ ಶಿಲೆಗಳು ಮತ್ತು ನವರತ್ನ , ಸುವರ್ಣ ನಾಣ್ಯಗಳನ್ನು ಭೂಮಿಗೆ ಅರ್ಪಿಸಿದರು. ಅಲ್ಲದೇ ಶ್ರೀಗಳು ಯೋಗಿ ಮತ್ತಿತರರನ್ನು ಸನ್ಮಾನಿಸಿದರು.