ಸುಳ್ಯ: ಒಟಿಪಿ ಪಡೆದು ವಂಚನೆ ಮಾಡುವ ಪ್ರಕರಣಗಳು ದಿನದಿಂದ ಹೆಚ್ಚುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ. ಇಂತಹದರಲ್ಲಿ ಬ್ಯಾಂಕ್ ಮ್ಯಾನೇಜರ್ ಎಂದು ನಂಬಿಸಿ ಓಟಿಪಿ ಪಡೆದು ವ್ಯಕ್ತಿಯೊಬ್ಬರಿಗೆ 40 ಸಾವಿರ ರೂ. ವಂಚಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಜಾಲ್ಸೂರಿನಲ್ಲಿ ನಡೆದಿದೆ.
ಮೋಸಗೊಂಡ ವ್ಯಕ್ತಿಗೆ ಮೊಬೈಲ್ ಕರೆಯೊಂದು ಬಂದಿದ್ದು, “ನಾನು ಸುಳ್ಯ ಕೆನರಾ ಬ್ಯಾಂಕಿನ ಮ್ಯಾನೇಜರ್ ಮಾತನಾಡುತ್ತಿದ್ದೇನೆ ಎಂದು ದೂರವಾಣಿ ಮುಖೇನ ಕರೆ ಮಾಡಿ ನಂಬಿಸಿ ನಿಮ್ಮ ದೂರವಾಣಿ ಸಂಖ್ಯೆಗೆ ಒಂದು ಓಟಿಪಿ ನಂಬರ್ ಬರಲಿದ್ದು ಅದನ್ನು ಕೂಡಲೇ ನನಗೆ ನೀಡಬೇಕು” ಎಂದು ತಿಳಿಸಿದ್ದಾನೆ ಎನ್ನಲಾಗಿದೆ.
ಬ್ಯಾಂಕ್ ನ ಮ್ಯಾನೇಜರ್ ಕೇಳುವಾಗ ಹಿಂದೆ ಮುಂದೆ ಯೋಚಿಸದೆ ಇವರ ದೂರವಾಣಿ ಸಂಖ್ಯೆಗೆ ಬಂದ ಓಟಿಪಿ ನಂಬರ್ ನ್ನು ಅವರು ಕರೆ ಮಾಡಿದ ವ್ಯಕ್ತಿಗೆ ನೀಡಿದ್ದಾರೆ. ಪ್ರಥಮ ಬಾರಿಗೆ 30000 ರೂಪಾಯಿ, ಎರಡನೆಯ ಬಾರಿಗೆ 9999 ರೂ, ಮೂರನೆಯ ಬಾರಿಗೆ 999 ರೂ ಸೇರಿದಂತೆ ಒಟ್ಟು 40,998 ರೂಪಾಯಿಯನ್ನು ಈ ವ್ಯಕ್ತಿ ಕಳೆದುಕೊಂಡಿದ್ದಾರೆ. ತಾನು ಮೋಸ ಹೋಗಿದ್ದೇನೆಂದು ಅರಿತ ಅವರು ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.