ಬಂಟ್ವಾಳ : ಜನಪ್ರತಿನಿಧಿಗಳ ಇಚ್ಛಾಶಕ್ತಿ, ಜನರ ಪಾಲ್ಗೊಳ್ಳುವಿಕೆಯಿಂದ ಸರ್ಕಾರದ ಕೆಲಸವನ್ನು ಅಚ್ಚುಕಟ್ಟಾಗಿ ಮಾದರಿಯಾಗಿ ಮಾಡಬಹುದು ಅನ್ನೋದಕ್ಕೆ ಉದಾಹರಣೆಯೊಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿದೆ. ಗ್ರಾಮಸ್ಥರ ಸಂಪೂರ್ಣ ಸಹಕಾರದಿಂದ ಇಲ್ಲೊಂದು ರಸ್ತೆ ನಿರ್ಮಾಣಗೊಂಡಿದ್ದು, ಈ ರಸ್ತೆ ರಾಜ್ಯದ ಗ್ರಾಮ ಮಟ್ಟದಲ್ಲಿ ಎಲ್ಲೂ ಇಲ್ಲದಂತಹ ರಸ್ತೆಯಂತೆ ಗುರುತಿಸಲ್ಪಟ್ಟಿದೆ. ಈ ರಸ್ತೆಯ ಎರಡೂ ಪಕ್ಕದಲ್ಲಿ ಪಾದಾಚಾರಿಗೆ ಹೋಗಲು ಫುಟ್ ಪಾತ್, ರಸ್ತೆಯುದ್ದಕ್ಕೂ ಸೋಲಾರ್ ಲೈಟ್ಸ್, ಇಕ್ಕೆಲಗಳಲ್ಲೂ ಚರಂಡಿ ವ್ಯವಸ್ಥೆ, ಹೀಗೆ ದೇಶ, ರಾಜ್ಯ ರಾಜಧಾನಿಗಳಂತ ನಗರ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುವಂತಹ ರಸ್ತೆಯಾಗಿ ಇದು ಹೊರಹೊಮ್ಮಿದೆ.
ಹೌದು ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದಲ್ಲಿ ಈ ಮಾದರಿ ರಸ್ತೆ ನಿರ್ಮಾಣವಾಗಿದ್ದು, ನಾಳೆ ಇಲ್ಲಿನ ಜನ ಗ್ರಾಮದ ಸಂಭ್ರಮಾಚರಣೆಯ ರೂಪದಲ್ಲಿ ಈ ರಸ್ತೆಯ ಉದ್ಘಾಟನೆಯನ್ನು ಆಯೋಜಿಸಿದ್ದಾರೆ. ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಈ ರಸ್ತೆಯನ್ನು ಉದ್ಘಾಟಿಸಲಿದ್ದಾರೆ.
ಸಜಿಪಮೂಡದಿಂದ ಮಿತ್ತಮಜಲು ದೇವಸ್ಥಾನದವರೆಗೆ ನಿರ್ಮಿಸಲಾಗಿರುವ 1.5 ಕಿಲೋಮೀಟರ್ ದೂರದ ಈ ರಸ್ತೆಗೆ 2.5 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ. ದೇಶ ಅಥವಾ ರಾಜ್ಯಗಳ ರಾಜಧಾನಿ ಹಾಗೂ ಮೆಟ್ರೋ ನಗರಗಳಲ್ಲಿ ಮಾತ್ರ ಕಾಣಸಿಗುವಂತಹ ಮಾದರಿ ರಸ್ತೆಯಂತೆ ಈ ರಸ್ತೆಯನ್ನು ನಿರ್ಮಿಸಲಾಗಿರುವುದು ಇದರ ವಿಶೇಷತೆಯಾಗಿದೆ.
ಸಂಪೂರ್ಣ ಕಾಂಕ್ರೀಟೀಕರಣದ ಮೂಲಕ ಈ ರಸ್ತೆಯನ್ನು ನಿರ್ಮಾಣ ಮಾಡಲಾಗಿದ್ದು, ರಸ್ತೆಗೆ ಅಗತ್ಯವಿರುವ ಜಾಗವನ್ನು ಇಲ್ಲಿನ ಜನ ಯಾವುದೇ ತಕರಾರಿಲ್ಲದೆ ನೀಡಿದ್ದಾರೆ. ರಸ್ತೆಯ ಎರಡೂ ಕಡೆಗಳಲ್ಲಿ ಪಾದಾಚಾರಿಗಳು ನಡೆದಾಡಲು ಫುಟ್ ಪಾತ್ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಆಕರ್ಷಕ ಇಂಟರ್ ಲಾಕ್ ಗಳನ್ನು ಅಳವಡಿಸುವ ಮೂಲಕ ರಸ್ತೆಗೆ ಮೆರಗು ಬರುವಂತೆ ಮಾಡಲಾಗಿದೆ.
ಅಲ್ಲದೆ ರಸ್ತೆಯುದ್ಧಕ್ಕೂ ಸೋಲಾರ್ ಲೈಟ್ ಗಳನ್ನು ಹಾಕಲಾಗಿದ್ದು, ಈ ಲೈಟ್ಸ್ ಗಳು ಕತ್ತಲಾಗುತ್ತಿದ್ದಂತೆ ಸ್ವಯಂಚಾಲಿತವಾಗಿ ಉರಿಯುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಮಳೆಗಾಲದಲ್ಲಿ ರಸ್ತೆಯ ಮೇಲೆ ಮಳೆ ನೀರು ಹರಿಯದಂತೆ ರಸ್ತೆಯ ಇಕ್ಕೆಲದಲ್ಲೂ ನೀರು ಸಲೀಸಾಗಿ ಹರಿದು ಹೋಗುವಂತೆ ಚರಂಡಿಯನ್ನೂ ಮಾಡಲಾಗಿದ್ದು, ರಸ್ತೆಯ ಎಲ್ಲಾ ಉಸ್ತುವಾರಿಯನ್ನೂ ಸಜಿಪಮೂಡದ ನಾಗರಿಕ ಸೇವಾ ಸಮಿತಿ ನೋಡಿಕೊಳ್ಳುತ್ತಿದೆ.