ಮಂಗಳೂರು: ಮಹಾನಗರಪಾಲಿಕೆ ರಸ್ತೆ ಕಾಮಗಾರಿ ವಿರೋಧಿಸಿ ರಸ್ತೆಯಲ್ಲಿ ಅಡ್ಡಲಾಗಿ ಮಲಗಿ ವೃದ್ಧೆ ಪ್ರತಿಭಟನೆ ಮಾಡಿರುವ ಘಟನೆ ಮಂಗಳೂರಿನ ಮಣ್ಣಗುಡ್ಡ ಗುರ್ಜಿ ಬಳಿ ಇಂದು ಬೆಳಗ್ಗೆ ನಡೆದಿದೆ.
ಮಣ್ಣಗುಡ್ಡೆಯ ಗುರ್ಜಿಯ ವಾರ್ಡ್ ನಂ.28 ರಲ್ಲಿ ಮೂರು ಮನೆ ಸಂಪರ್ಕಿಸುವ ಓಣಿ ರಸ್ತೆಗೆ ಇಂದು ಬೆಳಗ್ಗೆ ಮಂಗಳೂರು ಮಹಾನಗರಪಾಲಿಕೆ ವತಿಯಿಂದ ಕಾಂಕ್ರೇಟೀಕರಣ ನಡೆಯುತ್ತಿತ್ತು. ಈ ವೇಳೆ ಈ ಖಾಸಗಿ ಜಾಗ ನನಗೆ ಸೇರಿದ್ದು, ಇಲ್ಲಿ ಬಲವಂತಾವಾಗಿ ಪಾಲಿಕೆ ಕಾಂಕ್ರೇಟೀಕರಣ ಮಾಡುತ್ತಿದೆ ಎಂದು ಆರೋಪಿಸಿ ಸ್ಥಳೀಯ ವೈಲೇಟ್ ಪಿರೇರಾ ಎನ್ನುವ ವೃದ್ದೆ ರಸ್ತೆಯಲ್ಲಿ 2 ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ಮಲಗಿ ಏಕಾಂಗಿಯಾಗಿ ಪ್ರತಿಭಟಿಸಿದ್ದಾರೆ.
ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಕಾಮಗಾರಿ ಆದೇಶ ಪತ್ರ ತನ್ನಿ ಎಂದು ಒತ್ತಾಯಿಸಿದ ಮಹಿಳೆ, ಈ ಕಾಮಗಾರಿಯಿಂದ ತನ್ನ ಮನೆಯ ಅಂಗಳಕ್ಕೆ ನೀರು ನುಗ್ಗುತ್ತಿದೆ ಎಂದು ಆರೋಪಿಸಿದರು. ಈ ರಸ್ತೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನಕ್ಷೆಯಲ್ಲಿ ಕೂಡ ಇಲ್ಲ ಎಂದು ವಾದಿಸಿದರು. ಸ್ಥಳೀಯರ ಪ್ರಕಾರ ಈ ದಾರಿಯ ಬಗ್ಗೆ ಹೈಕೋರ್ಟ್ನಲ್ಲಿ ವಿಚಾರಣೆ ಮುಗಿದು ವೈಲೇಟ್ ಪೀರೇರಾ ಅವರಿಗೆ ಯಾವುದೇ ಹಕ್ಕಿಲ್ಲ ಎಂದು ತೀರ್ಪು ನೀಡಿತ್ತು ಎಂದು ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ವೇಳೆ ಕಾರ್ಪೋರೇಟರ್ ಸಂಧ್ಯಾ ಮೋಹನ್ ಆಚಾರ್ ಕೂಡ ಹಾಜರಿದ್ದು ಮಹಿಳೆಯ ಮನವೊಲಿಸಲು ವಿಫಲ ಪ್ರಯತ್ನ ನಡೆಸಿದರು.
ಘಟನೆ ಬಗ್ಗೆ ಮಾಹಿತಿ ಪಡೆದ ಮಂಗಳೂರು ಕಮೀಷನರೇಟ್ ಕೇಂದ್ರ ವಿಭಾಗದ ಎಸಿಪಿ ಪಿಎ ಹೆಗ್ಡೆ, ಉರ್ವ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಭಾರತಿ, ಬರ್ಕೆ ಠಾಣೆಯ ಇನ್ಸ್ಪೆಕ್ಟರ್ ಶರೀಫ್ ಸಹಿತ ವಿವಿಧ ಠಾಣೆಯ 10ಕ್ಕೂ ಹೆಚ್ಚು ಮಹಿಳಾ ಪೊಲೀಸರು ಸ್ಥಳಕ್ಕೆ ಬಂದು ಎಷ್ಟೇ ಮನವೊಲಿಸಿದರೂ ಮಹಿಳೆ ಮಲಗಿದ್ದಲ್ಲಿಂದ ಕದಲದೇ ಪ್ರತಿಭಟನೆ ನಡೆಸಿದ್ದಾರೆ.
ಕೊನೆಗೆ ತೀವ್ರ ಪ್ರತಿರೋಧದ ಮಧ್ಯೆಯೂ ದಾರಿ ಕಾಣದ ಪೊಲೀಸರು ಸ್ಥಳಕ್ಕೆ ಅಂಬುಲೆನ್ಸ್ ಕರೆಸಿ ಮಹಿಳೆಯನ್ನು ಬಲವಂತವಾಗಿ ಅಂಬುಲೆನ್ಸ್ ಎತ್ತಿ ಹಾಕಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯನ್ನು ಬಲವಂತದಿಂದ ಎತ್ತುವಾಗ ಒಂದಿಬ್ಬರ ಕೈ ವೃದ್ದೆ ಕಚ್ಚಿದ ವಿದ್ಯಮಾನವೂ ನಡೆಯಿತು. ಸ್ಥಳದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ಹಿರಿಯ ನಾಗರಿಕರ ವೇದಿಕೆ ಇದ್ದರೂ ವೃದ್ದೆಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದರು